ADVERTISEMENT

ಫುಟ್‌ಬಾಲ್ ಟೂರ್ನಿ: ರತ್ನಂ ಎಫ್‌ಸಿ, ಗೋವಾ ಬಾಯ್ಸ್ ಸೆಮಿಫೈನಲ್‌ಗೆ

‘ಬಿವಿಎಸ್‌ ಅಮೃತ ಮಹೋತ್ಸವ ಟ್ರೋಫಿ’ ಫುಟ್‌ಬಾಲ್ ಟೂರ್ನಿ: ಮೈಸೂರು, ಸಿಟಿಜನ್ಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 14:00 IST
Last Updated 8 ಮಾರ್ಚ್ 2024, 14:00 IST
   

ಮಂಗಳೂರು: ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ ಗೋವಾ ಬಾಯ್ಸ್ ಮತ್ತು ತಮಿಳುನಾಡಿನ ರತ್ನಂ ಎಫ್‌ಸಿ ತಂಡಗಳು ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ಆಹ್ವಾನಿತ ಫುಟ್‌ಬಾಲ್ ಟೂರ್ನಿ ‘ಬಿವಿಎಸ್‌ ಅಮೃತ ಮಹೋತ್ಸವ ಟ್ರೋಫಿ’ಯ ಸೆಮಿಫೈನಲ್ ಪ್ರವೇಶಿಸಿದವು.

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ರತ್ನಂ ಎಫ್‌ಸಿ 2–0 ಯಿಂದ ಸಿಟಿಜನ್ಸ್ ಎಫ್‌ಸಿ ಉಪ್ಪಳ ವಿರುದ್ಧ ಮತ್ತು ಗೋವಾ ಬಾಯ್ಸ್ 3–0 ಯಿಂದ ಮೈಸೂರು ಇಲೆವನ್ ಎದುರು ಜಯ ಸಾಧಿಸಿತು.

ಶಾನೊಯ್ ಕೊಲ್ಯಾಕೊ 29ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಬಲದಿಂದ ಮುನ್ನಡೆ ಸಾಧಿಸಿದ ಗೋವಾ ತಂಡಕ್ಕಾಗಿ ಬ್ರಿನ್ಸಿಲ್ ಬರೆಟ್ಟೊ 57ನೇ ನಿಮಿಷದಲ್ಲಿ ಮತ್ತು ಮೊಸಿಟೊ ಬರೆಟೊ 69ನೇ ನಿಮಿಷದಲ್ಲಿ ಗೋಲು ತಂದುಕೊಟ್ಟರು. ಸಿಟಿಜನ್ಸ್ ಎದುರಿನ ಪಂದ್ಯದಲ್ಲಿ ಆಸಿಫ್‌ (4ನೇ ನಿಮಿಷ) ಮತ್ತು ಸಹದ್‌ (67ನೇ ನಿ) ರತ್ನಂ ಎಫ್‌ಸಿಗಾಗಿ ಗೋಲು ಗಳಿಸಿದರು.

ADVERTISEMENT

ಶನಿವಾರ ಮಧ್ಯಾಹ್ನ 3.30ಕ್ಕೆ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಗೋವಾ ಬಾಯ್ಸ್‌ ಮತ್ತು ರತ್ನಂ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿದ್ದು ಎರಡನೇ ಸೆಮಿಫೈನಲ್‌ನಲ್ಲಿ ಮಂಗಳೂರಿನ ಮರ್ಚಂಟ್ ಎಫ್‌ಸಿ ಮತ್ತು ಕಸಬಾ ಎಫ್‌ಸಿ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.