ನವದೆಹಲಿ (ಪಿಟಿಐ): ಬುಡಾಪೆಸ್ಟ್ನಲ್ಲಿ ನಡೆದ 45ನೇ ಒಲಿಂಪಿಯಾಡ್ನಲ್ಲಿ ಚಿನ್ಜದ ಪದಕಗಳನ್ನು ಗೆದ್ದು ಚಾರಿತ್ರಿಕ ಸಾಧನೆಗೈದ ಭಾರತ ಚೆಸ್ ತಂಡಗಳಿಗೆ ₹3.2 ಕೋಟಿ ನಗದು ಬಹುಮಾನ ನೀಡುವುದಾಗಿ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಬುಧವಾರ ಇಲ್ಲಿ ಅಭಿನಂದನಾ ಸಮಾರಂಭದಲ್ಲಿ ಘೋಷಿಸಿದೆ.
ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ಅವರು ಸಮಾರಂಭದಲ್ಲಿ ಈ ಘೋಷಣೆ ಮಾಡಿದರು. ತಂಡದ ಪ್ರತಿಯೊಬ್ಬ ಆಟಗಾರ ಮತ್ತು ಆಟಗಾರ್ತಿಯರು ತಲಾ ₹25 ಲಕ್ಷ ಪಡೆಯಲಿದ್ದಾರೆ. ಪುರುಷರ ಮತ್ತು ಮಹಿಳಾ ತಂಡಗಳ ಕೋಚ್ ಆಗಿದ್ದ (ಕ್ರಮವಾಗಿ) ಶ್ರೀನಾಥ್ ನಾರಾಯಣನ್ ಮತ್ತು ಅಭಿಜಿತ್ ಕುಂಟೆ ಅವರಿಗೆ ₹15 ಲಕ್ಷ ನೀಡಲಾಗುವುದು.
ಭಾರತ ನಿಯೋಗದ ನೇತೃತ್ವ ವಹಿಸಿದ್ದ ಗ್ರ್ಯಾಂಡ್ಮಾಸ್ಟರ್ ದಿವ್ಯೇಂದು ಬರುವಾ ಅವರು ₹10ಲಕ್ಷ ಪಡೆಯಲಿದ್ದು, ಸಹಾಯಕ ತರಬೇತುದಾರರು ತಲಾ ₹7.5 ಲಕ್ಷ ಮೊತ್ತ ಪಡೆಯಲಿದ್ದಾರೆ.
‘ನಮ್ಮ ಆಟಗಾರರು ಚೆಸ್ ಬೋರ್ಡ್ ಮೇಲೆ ಶಾರ್ಪ್ ಶೂಟರ್ಸ್ ಆಗಿದ್ದಾರೆ. ವಿಶ್ವನಾಥನ್ ಆನಂದ್ ಅಂದು ಬಿತ್ತಿದ ಬೀಜ ಈಗ ಅರಣ್ಯದ ರೀತಿ ವ್ಯಾಪಕವಾಗಿ ಬೆಳೆದಿದೆ’ ಎಂದರು.
ಇದಕ್ಕೆ ಮೊದಲು ಒಲಿಂಪಿಯಾಡ್ ತಂಡದ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಂವಾದದಲ್ಲಿ ಭಾಗಿಯಾದರು. ಆಟಗಾರರ ಶ್ರದ್ಧೆ, ಸಮರ್ಪಣಾ ಭಾವವನ್ನು ಪ್ರಧಾನಿ ಪ್ರಶಂಸಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.