ADVERTISEMENT

ಚೆಸ್ ಟೂರ್ನಿ: ಅಕ್ಷಯಾ, ಸಿದ್ಧಾಂತ್‌ಗೆ ಚಾಂಪಿಯನ್ ಪಟ್ಟ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಚೆಸ್ ಟೂರ್ನಿ: ಪ್ರತೀತಿ, ಆರುಷಿ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:08 IST
Last Updated 19 ಮೇ 2024, 15:08 IST
ಎರಡೂ ವಿಭಾಗಗಳ ಸಾಧಕರು. ಎಡದಿಂದ: ಬಾಲಕಿರ ವಿಭಾಗ ರನ್ನರ್ ಅಪ್‌ ಆರುಷಿ ಡಿಸಿಲ್ವಾ, ಚಾಂಪಿಯನ್‌ ಅಕ್ಷಯಾ ಸಾಥಿ, ಮುಕ್ತ ವಿಭಾಗದ ರನ್ನರ್ ಅಪ್ ಪ್ರತೀತಿ ಹಾಗೂ ಚಾಂಪಿಯನ್‌ ಸಿದ್ಧಾರ್ಥ್ ಪೂಂಜಾ –ಪ್ರಜಾವಾಣಿ ಚಿತ್ರ
ಎರಡೂ ವಿಭಾಗಗಳ ಸಾಧಕರು. ಎಡದಿಂದ: ಬಾಲಕಿರ ವಿಭಾಗ ರನ್ನರ್ ಅಪ್‌ ಆರುಷಿ ಡಿಸಿಲ್ವಾ, ಚಾಂಪಿಯನ್‌ ಅಕ್ಷಯಾ ಸಾಥಿ, ಮುಕ್ತ ವಿಭಾಗದ ರನ್ನರ್ ಅಪ್ ಪ್ರತೀತಿ ಹಾಗೂ ಚಾಂಪಿಯನ್‌ ಸಿದ್ಧಾರ್ಥ್ ಪೂಂಜಾ –ಪ್ರಜಾವಾಣಿ ಚಿತ್ರ    

ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಕ್ಷಯಾ ಸಾಥಿ ಮತ್ತು ಬೆಂಗಳೂರಿನ ಸಿದ್ಧಾಂತ್ ಪೂಂಜ ಇಲ್ಲಿ ಭಾನುವಾರ ಮುಕ್ತಾಯಗೊಂಡ ಫಿಡೆ ರೇಟೆಡ್ 17 ವರ್ಷದೊಳಗಿನವರ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಮುಕ್ತ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ, ನಗರದ ಮಿನಿ ಟೌನ್‌ ಹಾಲ್‌ನಲ್ಲಿ ಆಯೋಜಿಸಿದ್ದ 9 ಸುತ್ತುಗಳ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯಾ 7.5 ಪಾಯಿಂಟ್‌ಗಳೊಂದಿಗೆ ಅಗ್ರ ಪಟ್ಟ ಅಲಂಕರಿಸಿದರು. ಅವರು 1809 ರೇಟಂಗ್‌ ಪಾಯಿಂಟ್ ಹೊಂದಿದ್ದಾರೆ. ಎರಡು ಡ್ರಾಗಳೊಂದಿಗೆ ಅಜೇಯರಾಗಿ ಉಳಿದ ಸಿದ್ಧಾಂತ್ 8 ಪಾಯಿಂಟ್‌ಗಳನ್ನು ಕಲೆ ಹಾಕಿದರು.

ಐದು ಮತ್ತು ಆರನೇ ಸುತ್ತಿನಲ್ಲಿ ಕ್ರಮವಾಗಿ ವೃಷಾಂಕ್ ರಾಯುಡು ಮತ್ತು ಋಷಿಕೇಶ್ ಗಣಪತಿ ಸುಬ್ರಮಣ್ಯನ್ ಜೊತೆ ಡ್ರಾ ಮಾಡಿಕೊಂಡ ಸಿದ್ಧಾಂತ್ ಕೊನೆಯ ದಿನದ ಮೂರು ಸುತ್ತುಗಳಲ್ಲಿ ಜಯ ಗಳಿಸಿ ಸಂಭ್ರಮಿಸಿದರು. ಪ್ರತೀತಿ ಬರ್ಡೋಲಿ ಎರಡನೇ ಸ್ಥಾನ ಗಳಿಸಿದರು.  

ADVERTISEMENT

ಬಾಲಕಿಯರ ವಿಭಾಗದಲ್ಲಿ ಶನಿವಾರ ಅಗ್ರಸ್ಥಾನದಲ್ಲಿ ಇದ್ದ ಏಕೈಕ ಆಟಗಾರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಆರುಷಿ ಡಿಸಿಲ್ವಾಗೆ ಭಾನುವಾರ ಕೊನೆಯ ಸುತ್ತಿನಲ್ಲಿ ಮಾಯಾ ಅಮೀನ್ ಎದುರು ಡ್ರಾ ಮಾಡಿಕೊಳ್ಳಲಷ್ಟೇ ಸಾಧ್ಯವಾಯಿತು. ಆದರೂ ಅವರ ಖಾತೆಯಲ್ಲಿ 7.5 ಪಾಯಿಂಟ್‌ಗಳು ಇದ್ದವು. ಆದರೆ ಉತ್ತಮ ಟೈಬ್ರೇಕರ್ ಆಧಾರದಲ್ಲಿ ಅಕ್ಷಯಾ ಚಾಂಪಿಯನ್ ಆದರು. ಎಂಟನೇ ಸುತ್ತಿನ ಮುಕ್ತಾಯಕ್ಕೆ 6.5 ಪಾಯಿಂಟ್ ಗಳಿಸಿದ್ದ ಅಕ್ಷಯಾ ಕೊನೆಯ ಸುತ್ತಿನಲ್ಲಿ ಕೃಪಾ ಉಕ್ಕಲಿ ವಿರುದ್ಧ ಜಯ ಗಳಿಸಿದರು.

ವಿವಿಧ ವಿಭಾಗಗಳ ವಿಜೇತರು ಮತ್ತು ಸಾಧಕರಿಗೆ ಒಟ್ಟು ₹ 1 ಲಕ್ಷ ಮೊತ್ತದ ನಗದು ಬಹುಮಾನವನ್ನು ವಿತರಿಸಲಾಯಿತು. 

ಕೊನೆಯ ಸುತ್ತಿನ ಪ್ರಮುಖ ಫಲಿತಾಂಶಗಳು: 17 ವರ್ಷದೊಳಗಿನ ಬಾಲಕಿಯರ ವಿಭಾಗ: ಅಕ್ಷಯಾ ಸಾಥಿಗೆ ಕೃಪಾ ಉಕ್ಕಲಿ ವಿರುದ್ಧ ಗೆಲುವು. ಶ್ರೀಯಾನಾ ಮಲ್ಯಗೆ ಸಾನ್ವಿತಾ ಶೆಟ್ಟಿ ವಿರುದ್ಧ, ಆದ್ಯಾ ಶೆಟ್ಟಿಗೆ ಆರಾಧ್ಯಾ ಶೆಟ್ಟಿ ವಿರುದ್ಧ ಜಯ; ಮಾಯಾ ಅಮೀನ್‌ ಮತ್ತು ಆರುಷಿ ಡಿಸಿಲ್ವಾ, ಧನುಷ್ಕಾ ಎಸ್‌ ಮತ್ತು ಶ್ರೇಯಾ ರಾಜೇಶ್‌, ಶ್ರದ್ಧಾ ರೈ ಮತ್ತು ಜಾಹ್ನವಿ ನಡುವಿನ ಪಂದ್ಯ ಡ್ರಾ.

17 ವರ್ಷದೊಳಗಿನವರ ಮುಕ್ತ ವಿಭಾಗ: ಸಿದ್ಧಾಂತ್ ಪೂಂಜಾಗೆ ಶ್ರೀಕರ ಡಿ ವಿರುದ್ಧ ಜಯ; ಪ್ರತೀತಿ ಬರ್ಡೋಲಿಗೆ ರವೀಶ್ ಕೋಟೆ ವಿರುದ್ಧ, ಸುಶಾಂತ್ ವಿ ಶೆಟ್ಟಿಗೆ ಗುಹನ್ ಹರ್ಷ ವಿರುದ್ಧ, ಹೃಷಿಕೇಶ್ ಗಣಪತಿ ಸುಬ್ರಮಣ್ಯಗೆ ಪ್ರಣವ್ ಪಿ.ಜಿ ವಿರುದ್ಧ ಜಯ; ನಾಗಸಾಯ್ ಕಣರಂ ಮತ್ತು ವಿಹಾನ್ ಸಚ್‌ದೇವ್‌, ಅನ್ಶುಲ್ ಪಣಿಕ್ಕರ್ ಮತ್ತು ಅದ್ರಿಜ್ ಭಟಾಚಾರ್ಯ, ರಿತೇಶ್ ಕೆ ಮತ್ತು ಯುಗ್ ತರುಣ್ ನಡುವಿನ ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.