ಬಜರಂಗ್ ಪೂನಿಯಾ
ನವದೆಹಲಿ: ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ)ದ ಕೆಂಗಣ್ಣಿಗೆ ತಾವು ಗುರಿಯಾಗಿರುವುದಾಗಿ ಕುಸ್ತಿಪಟು ಬಜರಂಗ್ ಪೂನಿಯಾ ಸೋಮವಾರ ಆರೋಪಿಸಿದ್ದಾರೆ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ದುರಹಂಕಾರವನ್ನು ಪ್ರಶ್ನಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸೋನೆಪತ್ನಲ್ಲಿ ಮಾರ್ಚ್ 10ರಂದು ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ನಿಷೇಧಿತ ಉದ್ದೀಪನ ಮದ್ದು ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕಾಗಿ ಪೂನಿಯಾ ಅವರನ್ನು ಏಪ್ರಿಲ್ 23ರಂದು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಅದನ್ನು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಅಂಗೀಕರಿಸಿತ್ತು. ಜೂನ್ 24ರಂದು ನಾಡಾ ಮತ್ತೊಮ್ಮೆ ಅಮಾನತುಗೊಳಿಸಿತ್ತು.
‘ನಾಡಾ ನನ್ನನ್ನು ಹೇಗೆ ಗುರಿಯಾಗಿಸಿದೆ ಎಂಬುದನ್ನು ಇದು ತೋರಿಸುತ್ತದೆ. ನಾನು ಯಾವುದೇ ಕಾರಣಕ್ಕೂ ಕುಸ್ತಿಯನ್ನು ಮುಂದುವರಿಸಲು ಅವರು ಬಯಸುವುದಿಲ್ಲ’ ಎಂದು ಬಜರಂಗ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅವರ (ನಾಡಾ) ಬಳಿ ಉತ್ತರಗಳಿಲ್ಲ ಮತ್ತು ಅವರು ತಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲೂ ಸಿದ್ಧರಿಲ್ಲ. ಕ್ರೀಡಾಪಟುವಿಗೆ ಕಿರುಕುಳ ನೀಡುವುದು ಅವರ ಉದ್ದೇಶ. ತಪ್ಪು ಪ್ರಶ್ನಿಸಿದವರನ್ನು ಗುರಿಯಾಗಿಸಲಾಗುತ್ತಿದೆ’ ಎಂದ ಬೇಸರ ವ್ಯಕ್ತಪಡಿಸಿದರು.
‘ಅವಧಿ ಮೀರಿದ ಕಿಟ್ ಬಗ್ಗೆ ನಾಡಾ ಏಕೆ ಉತ್ತರಿಸುವುದಿಲ್ಲ? ಮುಂದಿನ ಪಂದ್ಯಕ್ಕೆ ತಯಾರಿ ನಡೆಸಲು ನನಗೆ ಕೇವಲ 20 ನಿಮಿಷಗಳಿವೆ ಎಂದು ತಿಳಿದಿದ್ದರೂ ಎರಡು ಪಂದ್ಯಗಳ ನಡುವೆ ಮಾದರಿಗಳನ್ನು ಸಂಗ್ರಹಿಸಲು ನನ್ನ ಮೇಲೆ ಏಕೆ ಒತ್ತಡ ಹೇರಲಾಯಿತು ಎಂಬುದಕ್ಕೆ ಏಕೆ ಉತ್ತರಿಸುವುದಿಲ್ಲ’ ಬಜರಂಗ್ ಹೇಳಿದರು.
‘ಕೊನೆಯವರೆಗೂ ಹೋರಾಡುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.