ನವದೆಹಲಿ (ಪಿಟಿಐ): ಧ್ಯಾನ್ಚಂದ್ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಈ ವರ್ಷದಿಂದ ಮುಂದುವರಿಸದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ದೇಶದ ವಿವಿಧ ಕ್ರೀಡಾ ಪ್ರಶಸ್ತಿಗಳ ನೀಡುವಿಕೆಯನ್ನು ಶಿಸ್ತುಬದ್ಧಗೊಳಿಸುವ ಭಾಗವಾಗಿ ಧ್ಯಾನ್ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಬದಲು ಅರ್ಜುನ ಪ್ರಶಸ್ತಿ (ಜೀವಮಾನ) ಆರಂಭಿಸಲು ನಿರ್ಧರಿಸಲಾಗಿದೆ.
ಹಾಕಿ ದಂತಕಥೆ ಧ್ಯಾನ್ಚಂದ್ ಹೆಸರಿನಲ್ಲಿ 2002ರಲ್ಲಿ ಧ್ಯಾನ್ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಲಾಗಿತ್ತು. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡೆಗಳ ಭಾಗವಾಗಿರುವ ಸ್ಪರ್ಧೆಗಳಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಈ ಪ್ರಶಸ್ತಿ ನೀಡುತ್ತ ಬರಲಾಗಿದೆ.
2023ರಲ್ಲಿ ಈ ಪ್ರಶಸ್ತಿಯನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಮಂಜುಷಾ ಕನ್ವರ್, ಮಾಜಿ ಹಾಕಿ ತಾರೆ ವಿನೀತ್ ಕುಮಾರ್ ಮತ್ತು ಕಬಡ್ಡಿ ಆಟಗಾರ್ತಿ ಕವಿತಾ ಸೆಲ್ವರಾಜ್ ಅವರಿಗೆ ನೀಡಲಾಗಿತ್ತು.
‘ಕ್ರೀಡಾ ಪ್ರಶಸ್ತಿಗಳ ನೀಡುವಿಕೆಯಲ್ಲಿ ದಕ್ಷತೆ ತರಲು, ಧ್ಯಾನ್ಚಂದ್ ಪ್ರಶಸ್ತಿ ಬದಲು ಅರ್ಜುನ (ಜೀವಮಾನ) ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ತಳಮಟ್ಟದಲ್ಲಿ ಕ್ರೀಡಾಪಟುಗಳನ್ನು ಗುರುತಿಸಿ, ಬೆಳವಣಿಗೆಗೆ ಕಾರಣರಾದ ತರಬೇತುದಾರರು ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಕ್ರೀಡೆಯ ಬೆಳವಣಿಗೆಗೆ ಕೊಡುಗೆ ನೀಡಿದವರಿಗೆ ಅರ್ಜುನ ಪ್ರಶಸ್ತಿ (ಜೀವಮಾನ) ನೀಡಲಾಗುವುದು ಎಂದೂ ತಿಳಿಸಲಾಗಿದೆ.
ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ವಿಶ್ವವಿದ್ಯಾಲಯಕ್ಕೆ ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ ನೀಡಲಾಗುವುದು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 14.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.