ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರಿಗೆ ಕಳುಹಿಸಲಾದ ಪಟ್ಟಿಯಲ್ಲಿ ಕುಸ್ತಿಪಟು ಅಂತಿಮ ಪಂಘಲ್ ಅವರ ತರಬೇತುದಾರರ ಹೆಸರನ್ನು ಕೈಬಿಟ್ಟಿರುವುದಕ್ಕೆ ಭಾರತ ಕುಸ್ತಿ ಫೆಡರೇಷನ್ನ ಅಡ್ಹಾಕ್ ಸಮಿತಿ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ ಅಮಾನತಿನಲ್ಲಿದ್ದಾಗ ಅಡ್ಹಾಕ್ ಸಮಿತಿಯು ಸಂಘಟಕರಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸಿತ್ತು. ಈ ವೇಳೆ ಸಮಿತಿಯು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಪ್ಯಾರಿಸ್ಗೆ ಪಂಘಲ್ ಅವರ ಆದ್ಯತೆಯ ತರಬೇತುದಾರರಿಗೆ ವೀಸಾ ಮಂಜೂರು ವಿಳಂಬವಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಿಸಾರ್ನಲ್ಲಿ ತರಬೇತಿ ಪಡೆಯುತ್ತಿರುವ 19 ವರ್ಷದ ಪಂಘಲ್, 2023ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ ಭಾರತದ ಮೊದಲ ಕುಸ್ತಿಪಟುವಾಗಿದ್ದಾರೆ.
ಪಂಘಲ್ ಅವರು ತನ್ನ ಕೋಚ್ಗಳಾದ ಭಗತ್ ಸಿಂಗ್, ವಿಕಾಸ್ ಮತ್ತು ಫಿಸಿಯೋಥೆರಪಿಸ್ಟ್ ಹೀರಾ ಅವರೊಂದಿಗೆ ಪ್ಯಾರಿಸ್ಗೆ ತೆರಳಲು ಬಯಸಿದ್ದು, ಈ ಎಲ್ಲರ ಹೆಸರುಗಳಿಗೆ ಐಒಸಿ ಹಸಿರುನಿಶಾನೆ ನೀಡಿತ್ತು. ಆದರೆ, ನೆರವು ಸಿಬ್ಬಂದಿಯು ಇನ್ನೂ ವೀಸಾ ಮಂಜೂರಾತಿಗಾಗಿ ಕಾಯುತ್ತಿದ್ದಾರೆ.
ಆಗಸ್ಟ್ 3ರಂದು ಕುಸ್ತಿಪಟುಗಳು ಪ್ಯಾರಿಸ್ಗೆ ತಲುಪಬೇಕಿದೆ. ಆದರೆ, ನೆರವು ಸಿಬ್ಬಂದಿಗೆ ಆಗಸ್ಟ್ 2ಕ್ಕೆ ಬಯೋ ಮೆಟ್ರಿಕ್ಸ್ಗೆ ಕಾಲಾವಕಾಶ ನೀಡಲಾಗಿದೆ.
ಭೂಪೇಂದ್ರ ಸಿಂಗ್ ಬಾಜ್ವಾ ಮುಖ್ಯಸ್ಥರಾಗಿದ್ದ ಅಡ್ಹಾಕ್ ಸಮಿತಿಯಲ್ಲಿ ಎಂ.ಎಂ. ಸೋಮಯ್ಯ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.