ADVERTISEMENT

ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್: ಪುರುಷರ ರೇಸ್‌; ಆಕಾಶ್ ಪೂಜಾರ್ ಮಿಂಚು

ಕರ್ನಾಟಕದ ಸಹೋದರರ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:11 IST
Last Updated 29 ಸೆಪ್ಟೆಂಬರ್ 2024, 14:11 IST
ಆಕಾಶ್ ಪೂಜಾರ
ಆಕಾಶ್ ಪೂಜಾರ   

ಮಂಗಳೂರು: ನಗರದ ಆಕಾಶ್‌ ಪೂಜಾರ್ ತಮಿಳುನಾಡಿನ ರಾಮೇಶ್ವರದಲ್ಲಿ ಭಾನುವಾರ ಕೊನೆಗೊಂಡ ರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಗಮನ ಸೆಳೆದರು.

ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ತಮಿಳುನಾಡು ಸರ್ಫಿಂಗ್ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಪುರುಷರ 12 ಕಿಲೊಮೀಟರ್ ರೇಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅವರು ಈ ವಿಭಾಗದಲ್ಲಿ ಪದಕ ಗೆದ್ದ 16 ವರ್ಷದೊಳಗಿನ ಭಾರತದ ಮೊದಲ ಸರ್ಫರ್ ಎಂದೆನಿಸಿಕೊಂಡರು. ಕರ್ನಾಟಕ ಇಲ್ಲಿ ಒಟ್ಟು 8 ಪಕದಗಳನ್ನು ಗಳಿಸಿ ಪಾರಮ್ಯ ಮೆರೆಯಿತು. ಪ್ರತಿಕೂಲ ಹವಾಮಾನವನ್ನು ಮೀರಿ ಮುನ್ನುಗ್ಗಿದ ಅವರು ಮಾಜಿ ಚಾಂಪಿಯನ್‌ಗಳಿಗೆ ಪ್ರಬಲ ಪೈಪೋಟಿ ನೀಡಿದರು. 

ಇದಕ್ಕೂ ಮೊದಲು 16 ವರ್ಷದೊಳಗಿನವರ ತಾಂತ್ರಿಕ ರೇಸ್‌ನಲ್ಲಿ ಭಾರಿ ಮುನ್ನಡೆಯೊಂದಿಗೆ ಸಾಗಿದ ಆಕಾಶ್ ಪೂಜಾರ್‌ ಚಿನ್ನ ಗೆದ್ದು ಸಂಭ್ರಮಿಸಿದರು. ಅವರ ಸಹೋದರ ಪ್ರವೀಣ್ ಪೂಜಾರ್ ಎರಡು ಸೆಕೆಂಡುಗಳ ಅಂತರದಲ್ಲಿ ಬೆಳ್ಳಿ ಕಳೆದುಕೊಂಡರು. 16 ವರ್ಷದೊಳಗಿನವರ 200 ಮೀ ಸ್ಪ್ರಿಂಟ್‌ನಲ್ಲಿ ಪ್ರವೀಣ್‌ ಪೂಜಾರ್ ಬೆಳ್ಳಿ ಮತ್ತು ಆಕಾಶ್ ಪೂಜಾರ್ ಕಂಚಿನ ಪದಕ ಗಳಿಸಿದರು.

ADVERTISEMENT

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೆಳವಲಕೊಪ್ಪದ ಪ್ರವೀಣ್ ಮತ್ತು ಆಕಾಶ್ ಮಂಗಳೂರಿನಲ್ಲಿ ನೆಲೆಸಿದ್ದು ಇಲ್ಲಿನ ಸರ್ಫಿಂಗ್‌ ಸ್ವಾಮಿ ಫೌಂಡೇಷನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತನ್ವಿಗೆ ಮೂರು ಪದಕ 

ಮಹಿಳೆಯರ ವಿಭಾಗದಲ್ಲಿ ಉಡುಪಿ ಮಲ್ಪೆಯ ಕಡಲ್ ಸರ್ಫ್‌ ಕ್ಲಬ್‌ನ ತನ್ವಿ ಜಗದೀಶ್ ದೂರ ಅಂತರ ಮತ್ತು ತಾಂತ್ರಿಕ ರೇಸ್‌ನಲ್ಲಿ ಚಿನ್ನ, ಸ್ಪ್ರಿಂಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ರಾಮೇಶ್ವರಂ ಚಾಂಪಿಯನ್‌ಷಿಪ್‌ಗಾಗಿ ಮಳೆ ಗಾಳಿ ಮತ್ತು ಅಲೆಗಳ ಅಬ್ಬರ ಲೆಕ್ಕಿಸದೆ ಸತತ ಅಭ್ಯಾಸ ಮಾಡಲಾಗಿತ್ತು. ಅದಕ್ಕೆ ಈಗ ಫಲ ಸಿಕ್ಕಿದೆ. ಆಕಾಶ್ ಮತ್ತು ಪ್ರವೀಣ್ 2 ವರ್ಷಗಳಿಂದ ಕಠಿಣ ಪ್ರಯತ್ನಪಡುತ್ತಿದ್ದಾರೆ.
–ಆಕಾಶ್‌ ಶೆಟ್ಟಿ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.