ಪಡುಬಿದ್ರಿ (ಉಡುಪಿ ಜಿಲ್ಲೆ): ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಸಂಸ್ಥೆಯ ಉಡುಪಿ ಮತ್ತು ಕಾಪು ಘಟಕ ಆಯೋಜಿಸಿರುವ ರಾಷ್ಟ್ರ ಮಟ್ಟದ ಫಿಡೆ ರೇಟೆಡ್ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿ ಇದೇ 29 ಮತ್ತು 30ರಂದು ಕಾಪು ಹಳೆ ಮಾರಿಯಮ್ಮ ಸಭಾಭವನದಲ್ಲಿ ನಡೆಯಲಿದೆ.
ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ, ಉಡುಪಿ ಜಿಲ್ಲಾ ಸಂಸ್ಥೆ ಮತ್ತು ಮಂಗಳೂರಿನ ಎಫಿಲೆನ್ಸ್ ಟೆಕ್ನಾಲಜೀಸ್ ಮಾರ್ಕೆಟಿಂಗ್ ಕಂಪನಿ ಸಹಯೋಗದಲ್ಲಿ ನಡೆಯುವ ಟೂರ್ನಿಯಲ್ಲಿ ಒಟ್ಟು ₹ 2 ಲಕ್ಷ ಬಹುಮಾನ ಮೊತ್ತ ಇದೆ. 6, 8, 10, 12, 14, 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಮಂಗಳೂರಿನ ಶರಣ್ ರಾವ್ ಟೂರ್ನಿಯಲ್ಲಿ ಆಡಲಿರುವ ಏಕೈಕ ಇಂಟರ್ನ್ಯಾಷನಲ್ ಮಾಸ್ಟರ್ ಆಗಿದ್ದು 2127 ರೇಟಿಂಗ್ ಹೊಂದಿರುವ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗಿದೆ. 2142 ರೇಟಿಂಗ್ನ ನಿತಿನ್ ಬಾಬು ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದ್ದು ಸಾಹು ವಿಕ್ರಮಾದಿತ್ಯ, ರಾಮಕೃಷ್ಣ ಜೆ ಮತ್ತು ಆಕಾಶ್ ಜಿ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಶ್ರೇಯಾಂಕ ಹೊಂದಿದ್ದಾರೆ.
ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳದಿಂದ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.