ನವದೆಹಲಿ: ಇದೇ 26 ರಿಂದ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ದೃಢ ಸಂಕಲ್ಪದೊಡನೆ ಸ್ಪರ್ಧೆಗಳಿಗೆ ಸಜ್ಜಾಗಿದ್ದು, ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಕ್ರೀಡಾಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸುಮಾರು ಒಂದು ನಿಮಿಷದ ವಿಡಿಯೊದಲ್ಲಿ ಅವರು ಭಾರತ ಜಾಗತಿಕ ಕ್ರೀಡಾಶಕ್ತಿಯಾಗಿ ಗುರುತಿಸಿಕೊಳ್ಳಲು ಇದು ಸೂಕ್ತ ಸಮಯ ಎಂದಿದ್ದಾರೆ. ಈ ವಿಡಿಯೊದಲ್ಲಿ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತು ಬಾಕ್ಸಿಂಗ್ ಪಟು ನಿಶಾಂತ್ ದೇವ್ ಇದ್ದಾರೆ.
‘ಒಂದು ಕಾಲದಲ್ಲಿ ವಿಶ್ವ, ಭಾರತವನ್ನು ಹಾವಾಡಿಗರು ಮತ್ತು ಆನೆಗಳನ್ನು ಪಳಗಿಸುವವರ ದೇಶ ಎಂದು ಪರಿಗಣಿಸಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗ ನಾವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ತಂತ್ರಜ್ಞಾನದಲ್ಲೂ ಜಾಗತಿಕ ಶಕ್ತಿಯಾಗಿ ಬೆಳೆದಿದ್ದೇವೆ’ ಎಂದಿದ್ದಾರೆ.
‘ನಾವು ಕ್ರಿಕೆಟ್, ಬಾಲಿವುಡ್ನಿಂದ ಹೆಸರಾಗಿದ್ದೇವೆ. ನವೋದ್ಯಮಗಳೂ ಹೇರಳವಾಗಿವೆ. ಅತಿ ವೇಗದ ಆರ್ಥಿಕ ಶಕ್ತಿಯಾಗಿ ಬೆಳವಣಿಗೆ ಕಾಣುತ್ತಿದ್ದೇವೆ. ಈ ಮಹಾನ್ ದೇಶ ಮುಂದೇನು ಸಾಧಿಸಬೇಕು? ಇನ್ನಷ್ಟು ಚಿನ್ನ, ಬೆಳ್ಳಿ ಮತ್ತು ಕಂಚು’ ಎಂದಿದ್ದಾರೆ.
ಈ ಹಿಂದಿನ ಟೋಕಿಯೊ ಕ್ರೀಡೆಗಳಲ್ಲಿ ಗಳಿಸಿದ್ದ ಏಳು ಪದಕಗಳನ್ನು ಮೀರಿ ನಿಲ್ಲುವ ಗುರಿಹೊಂದಿರುವ ಭಾರತದ 118 ಕ್ರೀಡಾಪಟುಗಳನ್ನು ಬೆಂಬಲಿಸಿ ಎಂದು ಕ್ರೀಡಾಪ್ರೇಮಿಗಳನ್ನು ಉದ್ದೇಶಿಸಿ ಕೊಹ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.