ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಜುಲೈ 4ರಿಂದ 7ರ ವರೆಗೆ ನಗರದ ಫಾದರ್ ಮುಲ್ಲರ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪುರುಷ, ಮಹಿಳೆಯರ, 11, 13, 15, 17, 19 ವರ್ಷದೊಳಗಿನವರ ವಿಭಾಗ ಮತ್ತು ನಾನ್ ಮೆಡಲಿಸ್ಟ್ ಮತ್ತು ಕೆಡೆಟ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ರ್ಯಾಂಕಿಂಗ್ ಪಟ್ಟಿಯಲ್ಲಿರುವ ಮಂಗಳೂರಿನ ತ್ರಿಶಾ ಕರ್ಕೇರ ಮತ್ತು ಏಂಜಲಿನ್ ಅವರು 13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, 15 ವರ್ಷದೊಳಗಿನವರ ವಿಭಾಗದ ಅಥರ್ವ ನವರಂಗೆ ಮತ್ತು 17 ವರ್ಷದೊಳಗಿನವರ ವಿಭಾಗದ ಪ್ರೇಕ್ಷಾ ತಿಲಾವತ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ ಎಂದು ಅವರು ವಿವರಿಸಿದರು.
ಇದು ಈ ಋತುವಿನಲ್ಲಿ ರಾಜ್ಯದ ಎರಡನೇ ರ್ಯಾಂಕಿಂಗ್ ಟೂರ್ನಿಯಾಗಿದೆ. ಎಂಟು ವರ್ಷಗಳ ಹಿಂದೆ ಹಳೆಯಂಗಡಿಯ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ರಾಜ್ಯ ರ್ಯಾಂಕಿಂಗ್ ಟೂರ್ನಿ ಆಯೋಜಿಸಲಾಗಿತ್ತು. ಆ ನಂತರ ಉತ್ತಮ ಕ್ರೀಡಾಪಟುಗಳು ಬೆಳಕಿಗೆ ಬಂದಿದ್ದರು. ಈಗ ಜಿಲ್ಲೆಯಲ್ಲಿ ಟೇಬಲ್ ಟೆನಿಸ್ಗೆ ಉತ್ತೇಜನ ನೀಡಲು ಮತ್ತೊಮ್ಮೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೋಚ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಅಶ್ವಿನ್ ಕುಮಾರ್ ಪಡುಕೋಣೆ, ಸಂಘಟನಾ ಸಮಿತಿಯ ಅರ್ಚನಾ, ಕ್ಲಾರಾ ಮರಿಯ, ಪ್ರದೀಪ್, ನಿತೀಶ್ ಪಿ.ಎಂ ಮತ್ತು ಎಲ್ಸನ್ ನೊರೋನ್ಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.