ಜೊಹೊರ್ ಬಹ್ರು (ಮಲೇಷ್ಯಾ): ಗೋಲ್ಕೀಪರ್ ವಿಕ್ರಮ್ಜಿತ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೊಹೊರ್ ಕಪ್ ಜೂನಿಯರ್ ಹಾಕಿ ಟೂರ್ನಿಯ ರೋಚಕ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಶನಿವಾರ ಮಣಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು.
ಮೂರನೇ ಸ್ಥಾನದ ನಿರ್ಣಯಕ್ಕಾಗಿ ನಡೆದ ಪಂದ್ಯವು ನಿಗದಿತ ಅವಧಿಯಲ್ಲಿ 2–2 ಗೋಲುಗಳಿಂದ ಡ್ರಾಗೊಂಡಿತು. ಹೀಗಾಗಿ, ನಂತರ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ 3–2ರಿಂದ ಗೆಲುವು ಸಾಧಿಸಿತು.
ಶೂಟೌಟ್ನಲ್ಲಿ ಭಾರತದ ಸ್ಟ್ರೈಕರ್ಗಳಾದ ಗುರ್ಜೋತ್ ಸಿಂಗ್, ಮನ್ಮೀತ್ ಸಿಂಗ್ ಮತ್ತು ಸೌರಭ್ ಆನಂದ್ ಕುಶ್ವಾಹ ಅವರು ಚೆಂಡನ್ನು ಗುರಿ ಸೇರಿಸಿದರು. ಬಿಕ್ರಮ್ಜಿತ್ ಅವರು ಎದುರಾಳಿ ತಂಡದ ಮೂರು ಸ್ಕೋರ್ಗಳನ್ನು ತಡೆದು, ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಭಾರತದ ಪರ ದಿಲ್ರಾಜ್ ಸಿಂಗ್ (11ನೇ ನಿಮಿಷ) ಮತ್ತು ಮನ್ಮೀತ್ ಸಿಂಗ್ (20ನೇ ನಿ) ಅವರು ಕ್ರಮವಾಗಿ ಮೊದಲೆರಡು ಕ್ವಾರ್ಟರ್ನಲ್ಲಿ ಗೋಲು ಗಳಿಸಿದ್ದರು. ನ್ಯೂಜಿಲೆಂಡ್ನ ಓವನ್ ಬ್ರೌನ್ (51ನೇ) ಮತ್ತು ಜಾಂಟಿ ಎಲ್ಮ್ಸ್ (57ನೇ) ಅವರು ಅಂತಿಮ ಕ್ವಾರ್ಟರ್ನಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು.
ರೌಂಡ್ ರಾಬಿನ್ ಲೀಗ್ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಶುಕ್ರವಾರ ಮುಖಾಮುಖಿಯಾಗಿದ್ದವು. ಆ ಪಂದ್ಯವು 3–3 ಗೋಲುಗಳಿಂದ ಡ್ರಾ ಗೊಂಡಿತ್ತು. ಪಾಯಿಂಟ್ ಪಟ್ಟಿಯಲ್ಲಿ ಭಾರತ ಮೂರನೇ ಮತ್ತು ನ್ಯೂಜಿಲೆಂಡ್ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಮೊದಲೆರಡು ಸ್ಥಾನ ಪಡೆದ ಆಸ್ಟ್ರೇಲಿಯಾ ಮತ್ತು ಬ್ರಿಟನ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.