ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಜಯಿಸಿದ ನಂತರ ದೇಶದ ಬಹುತೇಕ ಎಲ್ಲ ನಗರಗಳಲ್ಲಿ ಮಧ್ಯರಾತ್ರಿಯವರೆಗೂ ವಿಜಯೋತ್ಸವ ನಡೆಯಿತು.
ಆದರೆ ವಿಶ್ವಕಪ್ ಟೂರ್ನಿಯ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ರೋಹಿತ್ ಶರ್ಮಾ ಬಳಗದ ವಿಜಯೋತ್ಸವ ಯಾರಿ ರೀತಿಯಿತ್ತು ಗೊತ್ತೆ?
ಯಾವುದೇ ವಿಶೇಷ ಉತ್ಸವ ಮಾಡದ ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಯು ಊಟ ಮಾಡಿದರು. ಜನಪ್ರಿಯ ಗೀತೆಗಳ ಸಂಗೀತ ಕೇಳುತ್ತ ಊಟ ಮಾಡಲೂ ಕೆಲವು ಆಟಗಾರರು ಆದ್ಯತೆ ಕೊಟ್ಟರು. ನಂತರ ಎಲ್ಲರೂ ವಿಶ್ರಾಂತಿ ಪಡೆಯಲು ತಮ್ಮ ಕೋಣೆಗಳಿಗೆ ತೆರಳಿದರು.
‘ಇವರೆಲ್ಲರೂ ಅತ್ಯಂತ ವೃತ್ತಿಪರರು. ತಮ್ಮ ಯೋಜನೆಯಲ್ಲಿ ಸಫಲರಾದ ಕೂಡಲೇ ಕ್ರೀಡಾಂಗಣದಲ್ಲಿ ಸಂಭ್ರಮ ಆಚರಿಸುತ್ತಾರೆ. ನಂತರ ಎಲ್ಲರೂ ಕೂಡಿ ಸಂತೋಷದಿಂದ ಊಟ ಮಾಡುತ್ತಾರೆ. ಹಾಸ್ಯ ಚಟಾಕಿಗಳನ್ನು ಹೇಳುತ್ತಾ, ಹಾಡು ಹೇಳಿ ಕೆಲವೊಮ್ಮೆ ನರ್ತಿಸಿಯೂ ಖುಷಿಪಡುತ್ತಾರೆ. ತಂಡದಲ್ಲಿ ಪರಸ್ಪರ ಬಾಂಧವ್ಯ ಮೂಡಿಸಲು ಇವೆಲ್ಲವೂ ಸಹಕಾರಿಯಾಗುತ್ತವೆ. ಟೂರ್ನಿಯ ಲೀಗ್ ಹಂತದಲ್ಲಿ ತಂಡವು ಇನ್ನೂ ಆರು ಪಂದ್ಯಗಳಲ್ಲಿ ಆಡಬೇಕಿದೆ. ಆದ್ದರಿಂದ ಪಾಕ್ ಎದುರಿನ ಜಯವನ್ನು ಒಂದು ಪಂದ್ಯದ ಯಶಸ್ಸಿನಂತೆ ಭಾವಿಸಿ ಮುಂದಿನ ಸವಾಲಿನ ಬಗ್ಗೆ ಚಿತ್ತ ನೆಟ್ಟಿದ್ದಾರೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪಂದ್ಯದ ನಂತರ ಬಿಸಿಸಿಐ ಡಾಟ್ ಟಿವಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸಂದರ್ಶಿಸಿದ ಹಾರ್ದಿಕ್ ಪಾಂಡ್ಯ, ‘ಅರ್ಧಶತಕ ಬಾರಿಸಿದ ನಂತರ ನಿಮ್ಮ ರಟ್ಟೆಯನ್ನು ಪ್ರದರ್ಶಿಸಿದ್ದೇಕೆ‘ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ‘ನಾನು ಹೊಡೆದ ಸಿಕ್ಸರ್ಗಳ ಬಗ್ಗೆ ಅಂಪೈರ್ಗಳು ಕೇಳಿದ್ದರು. ಅಷ್ಟು ಎತ್ತರಕ್ಕೆ ಸಿಕ್ಸರ್ ಎತ್ತಲು ನನ್ನ ಬ್ಯಾಟ್ನಲ್ಲಿ ಏನಿಟ್ಟಿದ್ದೇನೆ ಎಂದೂ ಕೇಳಿದ್ದರು. ಅದಕ್ಕೆ ಅವರಿಗೆ ಎಲ್ಲವೂ ನನ್ನ ಮಾಂಸಖಂಡದಲ್ಲಿದ್ದೆ. ಬ್ಯಾಟ್ನಲ್ಲಿ ಅಲ್ಲವೆಂದು ಹೇಳಲು ಆ ರೀತಿ ತೋರಿಸಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.