ADVERTISEMENT

‘ಬೇಹುಗಾರಿಕೆ ರಾಣಿ’ ನೂರ್

ನೂರೊಂದನೆಯ ವರ್ಷ ನೂರಾರು ಕಥೆಗಳು!

​ಅರುಣಾ ಎಂ.ಪಿ.
Published 12 ಜೂನ್ 2015, 19:30 IST
Last Updated 12 ಜೂನ್ 2015, 19:30 IST
‘ಬೇಹುಗಾರಿಕೆ ರಾಣಿ’  ನೂರ್
‘ಬೇಹುಗಾರಿಕೆ ರಾಣಿ’ ನೂರ್   

‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಮಡಿದರೆ, ಅದೇ ಕುಟುಂಬದ ಕುಡಿ  ನೂರ್ ಇನಾಯತ್ ಖಾನ್ ನಾಝಿ ಸಾಮ್ರಾಜ್ಯದ ವಿರುದ್ಧ ಹೋರಾಡಿ ದುರಂತ ಅಂತ್ಯ ಕಂಡ ಚೆಂದುಳ್ಳ ಚೆಲುವೆಯ ಕತೆ ಇದು.

ನೂರ್ ಇನಾಯತ್ ಖಾನ್!
ಮೂವತ್ತರ ದಶಕದಲ್ಲಿ ವಿದೇಶದಲ್ಲಿ  ಹೆಸರು ಮಾಡಿದ ಭಾರತೀಯ ಮೂಲದ ಅಪ್ರತಿಮ ಸುಂದರಿ. ಎರಡನೇ ಮಹಾಯುದ್ಧದಲ್ಲಿ ‘ಬೇಹುಗಾರಿಕೆ ರಾಣಿ’ ಎಂದು ಖ್ಯಾತಿಯಾದರೂ ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳದ ಹೆಸರು. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ವಂಶಸ್ಥೆಯಾಗಿದ್ದರೂ ಕೊನೆಯವರೆಗೂ ಕನ್ನಡಿಗರಿಗೆ ಪರಕೀಯಳಾಗಿ ಉಳಿದಾಕೆ.

ಬ್ರಿಟನ್‌ನ ಪ್ರತಿಷ್ಠಿತ ಅಂಚೆ ಇಲಾಖೆ ‘ರಾಯಲ್ ಮೇಲ್’ ಕಳೆದ ವರ್ಷ  ಹತ್ತು ಗಣ್ಯರ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿತು. ಅದರಲ್ಲಿ ಭಾರತೀಯ ಮೂಲದ ನೂರ್ ಸ್ಮರಣಾರ್ಥ ಅಂಚೆಚೀಟಿ ಕೂಡ ಸೇರಿತ್ತು. ಲಂಡನ್‌ನಲ್ಲಿ ಆಕೆ ವಾಸವಾಗಿದ್ದ ಮನೆ ಆವರಣ ಗೋರ್ಡನ್  ಸ್ಕ್ವೈರ್‌ನಲ್ಲಿ  ಈಚೆಗೆ ಬ್ರಿಟನ್  ರಾಜಕುಮಾರಿ ಆ್ಯನ್, ನೂರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು. ಬ್ರಿಟನ್‌ನಲ್ಲಿ ಸ್ಥಾಪಿಸಲಾದ ಏಷ್ಯಾದ ಮಹಿಳೆ, ಮುಸ್ಲಿಂ ಮಹಿಳೆಯ ಮೊದಲ ಪ್ರತಿಮೆ ಇದಾಗಿದೆ.

ಎರಡನೇ ಮಹಾಯುದ್ಧದಲ್ಲಿ ವಿಶ್ವದ ಗಮನ ಸೆಳೆದ ಮತ್ತು ಬ್ರಿಟನ್‌ ಸೇನೆ ‘ಯುದ್ಧದ ನಾಯಕಿ’ ಖ್ಯಾತಿಯ ಈ ಅಪ್ರತಿಮ ಸುಂದರಿ ವಿದೇಶಿ ನೆಲದಲ್ಲಿ ಅರಳಿ, ಅಲ್ಲಿಯೇ ಬಾಡಿದ ಕನ್ನಡದ ಹೂವು. ನೂರ್ ಇನಾಯತ್ ಖಾನ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಶರ್ಬಾನಿ ಬಸು ಬರೆದ ‘ಸ್ಪೈ ಪ್ರಿನ್ಸೆಸ್‌, ದ ಲೈಫ್‌ ಆಫ್‌ ನೂರ್‌ ಇನಾಯತ್‌ ಖಾನ್‌’ ಜೀವನ ಚರಿತ್ರೆಯಲ್ಲಿ ರೋಚಕ ಕಥೆಗಳು ಬಿಚ್ಚಿಕೊಳ್ಳುತ್ತವೆ. 

ಟಿಪ್ಪು ವಂಶಕ್ಕೆ ಸೇರಿದ ಹಜರತ್‌ ಇನಾಯತ್‌ ಖಾನ್‌ ಸೂಫಿ ಧರ್ಮದಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ವ್ಯಕ್ತಿ.  ಸೂಫಿ ಮತ ಪ್ರಚಾರಕ್ಕಾಗಿ 1910ರಲ್ಲಿ ದೇಶ ತೊರೆದು ಅಮೆರಿಕಕ್ಕೆ ತೆರಳಿದ.  ಅಲ್ಲಿ  ಪರಿಚಯವಾದ ಓರಾ ರೇ ಬೇಕರ್‌ ಕೈಹಿಡಿದ. ಮದುವೆಯ ನಂತರ ಓರಾ ಬೇಕರ್‌, ಪಿರಾನಿ ಅಮೀನಾ ಬೇಗಂ ಎಂದು  ಬದಲಾದರು.


ರಷ್ಯಾದ ತ್ಸಾರ್‌ ದೊರೆ ಎರಡನೇ ನಿಕೋಲಾಸ್‌ಗೆ ಧಾರ್ಮಿಕ ಮಾರ್ಗದರ್ಶಕರಾಗಿ ಕ್ರೆಮ್ಲಿನ್‌ ಸೇರಿದ ಖಾನ್‌ ದಂಪತಿ ಮೊದಲ ಮಗಳು ನೂರುನ್ನೀಸಾ ಬೇಗಂ. 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುತ್ತಿದ್ದಂತೆಯೇ ರಷ್ಯಾ ತೊರೆದ ದಂಪತಿ ಹಸು ಗೂಸಿನೊಂದಿಗೆ ಲಂಡನ್‌ಗೆ ತೆರಳಿದರು. ಅಲ್ಲಿಯೂ ಬಹಳ ದಿನ ನೆಲೆಯೂರಲಿಲ್ಲ. ಅಲ್ಲಿಂದ ಫ್ರಾನ್ಸ್‌ಗೆ ವಾಸ್ತವ್ಯ ಬದಲಿಸಿತು. ಸೂಫಿಗಳಂತೆಯೇ ಖಾನ್‌ ಕುಟುಂಬ ಅಲೆಮಾರಿಯಾಗಿತ್ತು.

ನೂರ್‌ ಹುಟ್ಟಿದ್ದು ಮಾಸ್ಕೊ (1914), ಬೆಳೆದದ್ದು ಲಂಡನ್‌ನಲ್ಲಿ, ಶಿಕ್ಷಣ ಪಡೆದದ್ದು ಫ್ರಾನ್ಸ್‌ನಲ್ಲಿ. ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ನೆಲದ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದಳು. ಸೂಫಿ ಗಾಯಕ ಹಾಗೂ ಜಾತ್ಯತೀತ ಮನೋಭಾವದ ತಂದೆ ವ್ಯಕ್ತಿತ್ವದ ಪ್ರಭಾವವೂ ಆಕೆಯ ಮೇಲಾಗಿತ್ತು. ತಂದೆಯ ಗುಣ ಮತ್ತು ತಾಯಿ ಸೌಂದರ್ಯವನ್ನು ಸಮನಾಗಿ ಎರಕ ಹೋಯ್ದ ವ್ಯಕ್ತಿತ್ವ ಆಕೆಯದಾಗಿತ್ತು.

ಪ್ಯಾರೀಸ್‌ನಲ್ಲಿ ಪ್ರೌಢ ಶಿಕ್ಷಣ ಮುಗಿಸುವ ವೇಳೆಗೆ ತಂದೆಯ ಅಕಾಲಿಕ ಸಾವು ಆಕೆಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತು. ಸುಂದರ ಭವಿಷ್ಯದ ಬಗ್ಗೆ ಹಲವು ಹೊಂಗನಸು ಕಟ್ಟಿಕೊಂಡಿದ್ದ ನೂರ್‌ ಹೆಗಲಿಗೆ ತಾಯಿ ಹಾಗೂ ಒಡಹುಟ್ಟಿದವರ ಜವಾಬ್ದಾರಿ ಬಿತ್ತು. ಇದು ಆಕೆಯ ಬದುಕಿನ ಮೊದಲ ತಿರುವು. ಅಪ್ಪಟ ನಾಚಿಕೆ ಸ್ವಭಾವದ ಬಾಲಕಿ ಕುಟುಂಬದ ಜವಾಬ್ದಾರಿ ನಿರ್ವಹಣೆಯ ಜೊತೆಗೆ ವಿದ್ಯಾಭಾಸ ಮುಂದುವರೆಸಿದಳು.

ಫ್ರಾನ್ಸ್‌ನ ಸೊರ್ಬೊನ್‌ನಲ್ಲಿ ವಿಶ್ವವಿದ್ಯಾಲಯದಿಂದ ಮಕ್ಕಳ ಮನಃಶಾಸ್ತ್ರದಲ್ಲಿ ಪದವಿ ಪಡೆದಳು. ಸಂಗೀತದಲ್ಲಿ ಅಪಾರ ಅಸಕ್ತಿಯಿದ್ದ ಕಾರಣ ಅಂದಿನ ದಿನಗಳಲ್ಲಿ ಭಾರಿ ಹೆಸರು ಮಾಡಿದ್ದ ಪಾಶ್ಚಾತ್ಯ ಸಂಗೀತಗಾರ್ತಿ ನಾಡಿಯಾ ಬೌಲೆಂಜರ್‌ ಬಳಿ  ಪಿಯಾನೊ ಹಾಗೂ ಹಾರ್ಪ್ ವಾದನ ನುಡಿಸುವುದನ್ನು  ಕಲಿತಳು.

ADVERTISEMENT

ಸರೋದ್‌ ನುಡಿಸುವುದೂ ಆಕೆಗೆ ಕರಗತವಾಗಿತ್ತು. 1939ರಲ್ಲಿ ಬುದ್ಧನ ಜಾತಕ ಕಥೆಗಳನ್ನು ಆಧರಿಸಿ ಆಕೆ ರಚಿಸಿದ ‘20 ಜಾತಕ ಟೇಲ್ಸ್’ ಎಂಬ ಕೃತಿ ಲಂಡನ್‌ನಲ್ಲಿ ಪ್ರಕಟವಾಯಿತು. ಕುಟುಂಬ ನಿರ್ವಹಣೆಗೆ ಪತ್ರಿಕೆಗಳಲ್ಲಿ ಮಕ್ಕಳ ಕಥೆ, ಕವನ ಬರೆದಳು. ಇದೇ ಹೊತ್ತಿಗೆ ಫ್ರೆಂಚ್‌ ಭಾಷೆಯ ಪ್ರೌಢಿಮೆಯಿಂದ ಫ್ರಾನ್ಸ್‌ ರೇಡಿಯೊದಲ್ಲಿ ಮಕ್ಕಳ ಕಾರ್ಯಕ್ರಮ ನೀಡಿದಳು.

ನಾಝಿ ದಬ್ಬಾಳಿಕೆ ವಿರುದ್ಧ ಸೆಟೆದು ನಿಂತಳು 
1940ರ ಹೊತ್ತಿಗೆ ಯುರೋಪ್‌ನಲ್ಲಿ ಕವಿದ ಎರಡನೇ ಮಹಾಯುದ್ಧದ ಕಾರ್ಮೋಡ  ಜಗತ್ತಿನ ಚಿತ್ರಣವನ್ನು ಮಾತ್ರ ಬದಲಿಸಲಿಲ್ಲ. ನೂರ್ ಬದುಕನ್ನೂ ಬದಲಿಸಿತು. ಮೊದಲ ಮಹಾಯುದ್ಧದಲ್ಲಿ ತಾಯಿಯ ಒಡಲಲ್ಲಿದ್ದ  ನೂರ್‌ ಎರಡನೇ ಮಹಾಯುದ್ಧದ ಹೊತ್ತಿಗೆ ನಾಝಿಗಳ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತಳು.

ಶಾಂತಿ, ಸಹನೆ, ಪ್ರೀತಿ, ಕ್ಷಮೆಯ ಪ್ರತಿಪಾದಕಳಾಗಿದ್ದ ನೂರ್ ನಾಝಿಗಳ ವಿರುದ್ಧ  ಹೋರಾಡುವ ಸಂಕಲ್ಪ ಮಾಡಿದಳು. ಆಕೆಯ ಕಿರಿಯ ಸಹೋದರ ವಿಲಾಯತ್‌ ಖಾನ್‌ ಕೂಡ ಆಕೆಯ ಬೆಂಬಲಕ್ಕೆ ನಿಂತ. ತಾನಾಯಿತು ತನ್ನ ಪಾಡಾಯಿತು ಎಂಬಂತಿದ್ದ ನೂರ್‌ ಜೀವನದ ಎರಡನೇ ದೊಡ್ಡ ತಿರುವು ಇದಾಗಿತ್ತು. ಆಕೆ ಕೇವಲ ದಂತದ ಗೊಂಬೆಯಾಗಿರಲಿಲ್ಲ. ಅಷ್ಟೇ ಸಂವೇದನಾಶೀಲಳಾಗಿದ್ದ ಕಾರಣ ನಾಝಿಗಳನ್ನು  ಸಹಿಸಿಕೊಳ್ಳಲಾಗಲಿಲ್ಲ.

ಹಿಟ್ಲರ್‌ನ ಜರ್ಮನ್‌ ಪಡೆಗಳು ಯುರೋಪ್ ರಾಷ್ಟ್ರಗಳ ಮೇಲೆ ಆಕ್ರಮಣ ನಡೆಸಿದವು. ಫ್ರಾನ್ಸ್ ಕೂಡ ಅವರ ಕೈವಶವಾಯಿತು. ಆಗ ನೂರ್  ಕುಟುಂಬದೊಂದಿಗೆ ಲಂಡನ್‌ಗೆ ಪಲಾಯನ ಮಾಡಬೇಕಾಯಿತು. ನಾಝಿಗಳ ವಿರುದ್ಧ ಸಿಟ್ಟನ್ನು ತುಂಬಿಕೊಂಡಿದ್ದ ಆಕೆ ಅಲ್ಲಿ ಬ್ರಿಟಿಷ್‌ ಸೇನೆಯ ಮಹಿಳಾ ವಾಯುಪಡೆ (ಡಬ್ಲುಎಎಎಫ್‌) ಸೇರಿದಳು. ಎರಡು ವರ್ಷದಲ್ಲಿ ವಿಶೇಷ ಕಾರ್ಯನಿರ್ವಹಣಾ ಪಡೆಯ ರೇಡಿಯೊ ಆಪರೇಟರ್‌ ಎಂದು ಬಡ್ತಿ ಪಡೆದಳು. ಅದರೊಂದಿಗೆ ಪ್ರಥಮ ಮಹಿಳಾ ರೇಡಿಯೋ ಆಪರೇಟರ್‌ ಎಂಬ ಹೆಗ್ಗಳಿಕೆಗೂ  ಪಾತ್ರಳಾದಳು.

ಮರು ವರ್ಷ 1943ರಲ್ಲಿ ಬ್ರಿಟಿಷ್‌ ಸೇನೆ ಆಕೆಯ ಚಾತುರ್ಯ ಮತ್ತು ಬದ್ಧತೆ ಮೆಚ್ಚಿ ಮಿತ್ರರಾಷ್ಟ್ರಗಳ ಗೂಢಚಾರಿಣಿಯನ್ನಾಗಿ ನಿಯೋಜಿಸಿತು. ಫ್ರೆಂಚ್ ಭಾಷೆಯಲ್ಲಿ ಹೊಂದಿದ್ದ ಪಾಂಡಿತ್ಯ ಆಕೆಯ ನೆರವಿಗೆ ಬಂತು. ಆ ಕಾಲದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಮನೆಯಿಂದ ಹೊರಬಂದು ಇಂಥ ಕೆಲಸದಲ್ಲಿ ತೊಡಗುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಮೆಡಲಿನ್‌ ಆದ ನೂರುನ್ನೀಸಾ!
ಫ್ರಾನ್ಸ್‌ನಲ್ಲಿ ಬೇಹುಗಾರಿಕೆಗೆ ತೊಡಗಿದ ಆಕೆ ‘ಮೆಡಲಿನ್’ ರಹಸ್ಯ ಸಾಂಕೇತಿಕ ಹೆಸರಿನೊಂದಿಗೆ ನಾಝಿ ಪಡೆಗಳ ಚಲನವಲನಗಳ ಬಗ್ಗೆ ರೇಡಿಯೊ ಸಂದೇಶ ರವಾನಿಸುತ್ತಾಳೆ. ಮೆಡಲಿನ್‌, ನೂರ್‌ ಬೇಕರ್,  ಜೀಯಾನ್‌ ಮೇರಿ ರೆಜಿನರ್‌ ಎಂದೆಲ್ಲಾ  ಸಮಯ ಸಂದರ್ಭಕ್ಕೆ ತಕ್ಕಂತೆ ತನ್ನ ಹೆಸರು ಬದಲಾಯಿಸಿಕೊಳ್ಳುತ್ತಿರುತ್ತಾಳೆ.

ಅದೊಂದು ರಾತ್ರಿ ನೂರ್‌ ಹಾಗೂ ಇತರ ಗೂಢಚಾರಿಣಿಯರು ನಾಝಿ ಪಡೆಗಳ ಕೈಗೆ ಸಿಕ್ಕಿ ಬೀಳುತ್ತಾರೆ. ಅದು ಹೇಗೊ ಅವರಿಂದ ತಪ್ಪಿಸಿಕೊಂಡ ಆಕೆ ನಂತರ ಒಂದು ಕಡೆ ನೆಲೆ ನಿಲ್ಲಲಿಲ್ಲ. ತಲೆಮರೆಸಿಕೊಂಡ ಈಕೆಗಾಗಿ ಜರ್ಮನ್‌ ಸೈನಿಕರು ಹುಡುಕುತ್ತಿದ್ದರು. ಜರ್ಮನ್‌ ಸೈನ್ಯದ  ಪರ ಕೆಲಸ ಮಾಡುತ್ತಿದ್ದ ಫ್ರೆಂಚ್‌ ಗೂಢಚಾರಣಿಯ ನಂಬಿಕೆ ದ್ರೋಹದಿಂದ ನೂರ್‌ ಕೊನೆಗೂ ನಾಜಿಗಳಿಗೆ ಸೆರೆ ಸಿಗುತ್ತಾಳೆ. 

ಜರ್ಮನ್‌ ಸೇನೆಯ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳಲು ಯಶಸ್ವಿಯಾಗುವ ಆಕೆ  ಕೆಲವೇ ದಿನಗಳಲ್ಲಿ ಮತ್ತೆ ಸೆರೆ ಸಿಗುತ್ತಾಳೆ.  ಈ ಬಾರಿ ಭಾರಿ ಕಠಿಣ ಶಿಕ್ಷೆ ಕಾದಿತ್ತು. ನೇರವಾಗಿ ಆಕೆಯನ್ನು ಜರ್ಮನಿಯ ಕಾರಾಗೃಹಕ್ಕೆ ಅಟ್ಟಲಾಯಿತು. ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಬಿಗಿದು ಕತ್ತಲೆಯ ಕೂಪಕ್ಕೆ ತಳ್ಳಿ ಅಮಾನುಷ ಚಿತ್ರಹಿಂಸೆ ನೀಡಲಾಯಿತು. ಇಷ್ಟಾದರೂ ಆಕೆ ಒಂದೇ ಒಂದು ಗುಟ್ಟನ್ನು ಬಾಯ್ಬಿಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.