ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸರ್ವ ಧರ್ಮೀಯರಿಗೂ ಗೌರವ ನೀಡಿ’

Published : 29 ಸೆಪ್ಟೆಂಬರ್ 2024, 7:15 IST
Last Updated : 29 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments

ಉಡುಪಿ: ಇನ್ನೊಂದು ಧರ್ಮದ ಧರ್ಮಗ್ರಂಥಗಳನ್ನು ಓದಿಕೊಂಡು ಅವರ ಆಚಾರ ವಿಚಾರಗಳು ಮತ್ತು ಬೋಧನೆಗಳನ್ನು ತಿಳಿದುಕೊಂಡಾಗ ಆ ಧರ್ಮದ ಜನರ ಬಗ್ಗೆ ಗೌರವ ಪ್ರೀತಿ ಮತ್ತು ವಿಶ್ವಾಸ ಹುಟ್ಟುತ್ತದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.

ಚರ್ಚ್‌ನ ಸಭಾಂಗಣದಲ್ಲಿ ಜಮಾತೆ ಇಸ್ಲಾಮಿಹಿಂದ್ ಮಲ್ಪೆ ಘಟಕದ ನೇತೃತ್ವದಲ್ಲಿ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಎಲ್ಲಾ ಧರ್ಮಗಳು ಮಾನವೀಯತೆ, ಸಾಮರಸ್ಯದ ಬದುಕಿನ ಬೋಧನೆ ಮಾಡುತ್ತವೆ. ಪ್ರವಾದಿ ಮಹಮ್ಮದ್ ಪೈಗಂಬರ್ ಬೋಧಿಸಿದ ದಯೆ, ಕ್ಷಮೆ, ನ್ಯಾಯ ಹಾಗೂ ಸಮಾನತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ತೊಟ್ಟಂ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಕೂಡಿ ಬಾಳುವುದು ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟ ಸಂಸ್ಕೃತಿಯಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಪರಸ್ಪರ ಅಪನಂಬಿಕೆಗಳು ಹುಟ್ಟಿವೆ. ಇದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ತುಂಬಿದ್ದು ಸರ್ವ ಧರ್ಮೀಯರು ಒಟ್ಟಾಗಿ ಸೇರಿದಾಗ ಸಹಬಾಳ್ವೆಯ ಸಂದೇಶ ಸಾರಿದಂತಾಗುತ್ತದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಇಸಾಕ್ ಪುತ್ತೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಧರ್ಮಗ್ರಂಥಗಳು ಇನ್ನೊಬ್ಬರಿಗೆ ನೋವಾಗದಂತೆ ವರ್ತಿಸುವ ಸಂದೇಶವನ್ನು ಸಾರಿದ್ದು ಅದರಂತೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸಗಳು ನಡೆಯಬೇಕು ಎಂದರು.

ಸಮನ್ವಯ ಸರ್ವಧರ್ಮ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ, ಮಲ್ಪೆ ಸಿಎಸ್ಐ ಚರ್ಚ್‌ನ ಎಡ್ವಿನ್ ಸೋನ್ಸ್, ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾದ ಗಣೇಶ್ ನೆರ್ಗಿ ಉಪಸ್ಥಿತರಿದ್ದರು.

ಮಲ್ಪೆ ಅಬುಬಕ್ಕರ್ ಜಾಮೀಯಾ ಮಸೀದಿ ಇಮಾಮ್ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಘಟಕ ಅಧ್ಯಕ್ಷ ಬಿ. ಸಿರಾಜ್ ಅಹ್ಮದ್ ಧನ್ಯವಾದವಿತ್ತರು. ಜಿ. ಶುಐಬ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT