ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಅಧ್ಯಕ್ಷರ ಆಯ್ಕೆ; ಜಿದ್ದಿಗೆ ಬೀಳದಿರೋಣ

Published : 27 ಸೆಪ್ಟೆಂಬರ್ 2024, 17:49 IST
Last Updated : 27 ಸೆಪ್ಟೆಂಬರ್ 2024, 18:32 IST
ಫಾಲೋ ಮಾಡಿ
Comments

ಅಧ್ಯಕ್ಷರ ಆಯ್ಕೆ: ಜಿದ್ದಿಗೆ ಬೀಳದಿರೋಣ

ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಶಕಗಳ ಬಳಿಕ ಮತ್ತೆ ಆಯೋಜಿಸುವ ಅವಕಾಶ ಮಂಡ್ಯ ನೆಲಕ್ಕೆ ಲಭಿಸಿರುವುದು ಹೆಮ್ಮೆಯ ವಿಚಾರ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಹಲವು ವೈಶಿಷ್ಟ್ಯಗಳಿಗೆ ಕಾರಣವಾಗಬೇಕಿದೆ. ಆದರೆ ಅಧ್ಯಕ್ಷರಾಗಿ ಸಾಹಿತ್ಯೇತರ ಕ್ಷೇತ್ರದವರು ಆಯ್ಕೆಯಾಗಲಿ ಮತ್ತು ಮಂಡ್ಯದವರೇ ಅಧ್ಯಕ್ಷರಾಗಲಿ ಎಂಬ ಬೇಡಿಕೆ ಆರಂಭದಲ್ಲೇ ಮುನ್ನೆಲೆಗೆ ಬಂದು, ಟೀಕೆಗೂ ಗುರಿಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಕನ್ನಡ ಸಾಹಿತ್ಯ ಪರಿಷತ್ತು ಹಿಂದಿನಿಂದಲೂ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಅದನ್ನು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೂ ಉಳಿಸಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅಖಂಡ ಕರ್ನಾಟಕವನ್ನು ಒಳಗೊಂಡಿರುವಂತಹದ್ದು. ಅದು ಕನ್ನಡನಾಡಿನ ಸಾಂಸ್ಕೃತಿಕ ಆತ್ಮಚೈತನ್ಯವನ್ನು
ಪ್ರತಿನಿಧಿಸುತ್ತದೆ. ಆದ್ದರಿಂದ ಅಖಂಡ ಕರ್ನಾಟಕದ ಸಾಹಿತ್ಯ ಲೋಕದವರು ಅಧ್ಯಕ್ಷರಾಗಲಿ ಎಂಬ ಔದಾರ್ಯವನ್ನು ಮೆರೆಯೋಣ.

–ಲೋಕೇಶ ಬೆಕ್ಕಳಲೆ, ಮಂಡ್ಯ

ಕನ್ನಡ ಮಾಧ್ಯಮಕ್ಕೆ ಆದ್ಯತೆಯ ಬೇಡಿಕೆ: ವ್ಯರ್ಥಾಲಾಪ?

ಸರ್ಕಾರಿ ಶಾಲೆಯನ್ನು ಸುಸಜ್ಜಿತಗೊಳಿಸಿ, ಅಲ್ಲಿರುವ ಕನ್ನಡ ಮಾಧ್ಯಮದ ವ್ಯವಸ್ಥೆಯನ್ನು ಸುಭದ್ರಗೊಳಿಸುವುದು ಬಿಟ್ಟು, ಈ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಸರ್ಕಾರ ಆದ್ಯತೆ ನೀಡುವುದು ಸರಿಯಲ್ಲ ಎಂದು 
ಪು.ಸೂ.ಲಕ್ಷ್ಮೀನಾರಾಯಣ ರಾವ್ ಅಭಿಪ್ರಾಯಪಟ್ಟಿರುವುದು (ವಾ.ವಾ., ಸೆ. 27) ಸರಿಯಾಗಿದೆ. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲೇ ಇರಬೇಕು ಎಂಬ ಶಿಕ್ಷಣತಜ್ಞರ ಅಭಿಪ್ರಾಯವನ್ನು  ಗಂಭೀರವಾಗಿ
ಪರಿಗಣಿಸಬೇಕಾಗಿದೆ ಎಂದು ಸಹ ಅವರು ಹೇಳಿದ್ದಾರೆ. ಸಾವಿರಾರು ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸುವ ‘ಮಹದಾಸೆ’ಯ ಸರ್ಕಾರವಿರುವಾಗ ಶಿಕ್ಷಣ ತಜ್ಞರ ಮಾತಿಗೆ ಬೆಲೆ ಎಲ್ಲಿದೆ? ಈ ಮುಂಚೆ ಅಧಿಕಾರದಲ್ಲಿ ಮೆರೆದ ಸರ್ಕಾರಗಳು ಕನ್ನಡಕ್ಕೆ ಸಲ್ಲಿಸಬೇಕಿದ್ದ ಕನಿಷ್ಠ ಸೇವೆಯಾದರೂ ಯಾವುದಿತ್ತು? ರಾಜ್ಯದಲ್ಲಿನ ಶಿಥಿಲಗೊಂಡ ಅದೆಷ್ಟೋ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ಹೈಟೆಕ್ ಅಲ್ಲದಿದ್ದರೂ ಇದ್ದುದರಲ್ಲಿಯೇ ಸದೃಢ ಕಟ್ಟಡಗಳನ್ನಾಗಿ ಮಾಡುವುದಾಗಿತ್ತು, ಶಿಕ್ಷಕರ ಕೊರತೆ ನೀಗಿಸುವುದು, ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳಂತಹ ತೀರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿತ್ತು. ಗತಕಾಲವನ್ನು ನೆನೆದು ಈಗ ಪ್ರಯೋಜನ ಇಲ್ಲ. ಆದರೆ ಅದರಿಂದ ಪಾಠವನ್ನಾದರೂ ಕಲಿತೆವೇ? ಶಾಲೆಗಳ ದುಃಸ್ಥಿತಿಯನ್ನು ಕಂಡೇ ಎಷ್ಟೋ ಪೋಷಕರಿಗೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಅನಿವಾರ್ಯ ಸಂದರ್ಭ ಒದಗಿತು.

ಈಗ ಹೈಟೆಕ್‌ ಆಗಿ ಮಕ್ಕಳನ್ನು ಸೆಳೆಯುತ್ತಿರುವ ಬೆಂಗಳೂರಿನ ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯ ನಿದರ್ಶನವೇ (ಪ್ರ.ವಾ., ಸೆ. 26) ನಮ್ಮ ಮುಂದಿದೆಯಲ್ಲ! ಈ ಮೊದಲು, ಸುತ್ತಮುತ್ತ ಖಾಸಗಿ ಶಾಲೆಗಳು ಆರಂಭವಾದ ಮೇಲೆ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗತೊಡಗಿತ್ತು ಎಂದು ವರದಿ ತಿಳಿಸಿದೆ. ಬೆಂಗಳೂರು ನಗರದ ಸರ್ಕಾರಿ ಶಾಲೆಯ ದುಃಸ್ಥಿತಿಯೇ ಇಂಥದ್ದಾಗಿತ್ತು. ಇನ್ನು ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿ?! ಬ್ಯಾಟರಾಯನಪುರ ಶಾಲೆಯ ಪುನರ್‌ನಿರ್ಮಾಣವು ದಾನಿಗಳ ನೆರವಿನಿಂದ ಆಗಿದ್ದು ಎಂಬುದನ್ನು ನಾವು ಗಮನಿಸಬೇಕು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ
ತರಗತಿಗಳನ್ನು ತೆರೆಯುವ ಮಹದಾಸೆ ಸರ್ಕಾರದ್ದು. ಹೀಗಿರುವಾಗ, ಕನ್ನಡ ಮಾಧ್ಯಮಕ್ಕೆ ಆದ್ಯತೆ ಎನ್ನುವುದು ಮರೀಚಿಕೆ. ಅದು ವ್ಯರ್ಥಾಲಾಪ ಎನಿಸದೇ?

–ಸಾಮಗ ದತ್ತಾತ್ರಿ, ಬೆಂಗಳೂರು

ಮಾಹಿತಿ ಒದಗಿಸದಿರುವುದು ಸರಿಯಲ್ಲ

ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು ಪೂರ್ವಗ್ರಹಪೀಡಿತವೇ ಅಥವಾ ಕಾನೂನುಬದ್ಧವೇ ಎಂಬುದರ ಬಗ್ಗೆ ನಡೆದಿದ್ದ ಹಲವಾರು ರೀತಿಯ ವ್ಯಾಖ್ಯಾನಗಳು, ನ್ಯಾಯಾಲಯವು ಈ ಅನುಮತಿಯನ್ನು ಎತ್ತಿ ಹಿಡಿದ ನಂತರವಾದರೂ ಕೊನೆಯಾಗಬೇಕಾಗಿತ್ತು. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷ ಇನ್ನೂ ಟೀಕಿಸುವುದನ್ನು ಬಿಟ್ಟಿಲ್ಲ ಎಂದರೆ, ಅದು ಪರೋಕ್ಷವಾಗಿ ನ್ಯಾಯಾಲಯದ ತೀರ್ಪನ್ನು ಅಗೌರವಿಸಿದಂತೆಯೇ ಸರಿ. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದಾಗ್ಯೂ ಯಾವುದೇ ವಿವರಣೆ, ಮಾಹಿತಿ ಕೇಳಿ ರಾಜ್ಯಪಾಲರಿಂದ ಬರುವ ಪತ್ರಕ್ಕೆ ನೇರವಾಗಿ ಉತ್ತರ ನೀಡದಿರಲು ಅಧಿಕಾರಿಗಳಿಗೆ ತಾಕೀತು ಮಾಡಿರುವುದು ಸರಿಯಾದ ಕ್ರಮವಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದಿಂದ ಮಾಹಿತಿ ಪಡೆಯುವ ಹಕ್ಕು ಪ್ರತಿ ನಾಗರಿಕನಿಗೂ ಇರುವಾಗ, ರಾಜ್ಯದ ಮೊದಲ ಪ್ರಜೆಯಾದ ರಾಜ್ಯಪಾಲರಿಗೆ ಮಾಹಿತಿ ನೀಡಲು ನಿರಾಕರಿಸುವುದು ಕಾನೂನುಬಾಹಿರ ಆಗಬಹುದೇನೊ.

ರಾಜ್ಯಪಾಲರು ತಮಗೆ ಬಂದ ದೂರಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದರಿಂದ ಅವರು ಸರ್ಕಾರದಿಂದ ಮಾಹಿತಿಯನ್ನು ಕೇಳುವುದು ಸರಿಯಾದ ಕ್ರಮವಾಗಿರುತ್ತದೆ. ಅಲ್ಲದೆ ರಾಜಭವನ ಮತ್ತು ಸರ್ಕಾರ ಎರಡೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಎರಡು ಅಂಗಗಳು. ಹಾಗಾಗಿ, ಇವೆರಡೂ ಅಂಗಗಳ ನಡುವಿನ ತಿಕ್ಕಾಟ, ಕಾನೂನು ಹೋರಾಟಕ್ಕೆ ತಗಲುವ ವೆಚ್ಚವು ಸಾಮಾನ್ಯ ನಾಗರಿಕನ ತೆರಿಗೆಯ ಹಣದ ಅಪವ್ಯಯ. 

–ಕೆ.ಎಂ.ನಾಗರಾಜು, ಮೈಸೂರು

ಕನ್ನಡ ಬದ್ಧತೆ: ವೇದಿಕೆಗೆ ಸೀಮಿತವೇ?

ದಾಬಸ್‌ಪೇಟೆ– ದೊಡ್ಡಬಳ್ಳಾಪುರ ನಡುವೆ ನಿರ್ಮಾಣವಾಗಲಿರುವ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರವಾದ ‘ಕ್ವಿನ್‌ ಸಿಟಿ’ಗೆ (Knowledge, Wellbeing and Innovation- KWIN city) ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಮಾತೆತ್ತಿದರೆ ಅಡಳಿತದಲ್ಲಿ ಕನ್ನಡ ಅನುಷ್ಠಾನದ ಬಗೆಗೆ ಮಾತನಾಡುವ ಸರ್ಕಾರಕ್ಕೆ ಇಂತಹ ಯೋಜನೆಗೆ ಕನ್ನಡದ ಹೆಸರು ದೊರಕದಿರುವುದು ಮಾತ್ರ ತೀರಾ ಆಶ್ಚರ್ಯಕರ. ಇಂಗ್ಲಿಷ್‌ ಹೆಸರಿಗೆ ಶರಣಾಗುವ ಬದಲು ಕಸ್ತೂರಿ ಕನ್ನಡದಲ್ಲಿ ಸರಳವಾಗಿ ‘ಜ್ಞಾನನಗರಿ’ ಎಂದು ಕರೆಯಬಹುದಿತ್ತಲ್ಲವೇ? ನಮ್ಮ ಜನಪ್ರತಿನಿಧಿಗಳಿಗೆ ‘ಕನ್ನಡ ಬದ್ಧತೆ’ ಬರೀ ವೇದಿಕೆಗೆ ಮತ್ತು ಹೇಳಿಕೆಗಳಿಗೆ ಸೀಮಿತವಾಗಿದೆ ಎನ್ನುವುದು ಇನ್ನೊಮ್ಮೆ ದೃಢಪಟ್ಟಿದೆ.

–ರಮಾನಂದ ಶರ್ಮಾ, ಬೆಂಗಳೂರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT