ಬೆಂಗಳೂರು: ‘ಅನ್ನಭಾಗ್ಯ’ವೂ ಸೇರಿದಂತೆ ವಿವಿಧ ಯೋಜನೆಗಳಿಗೆ ‘ಕತ್ತರಿ’ ಹಾಕಿ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಹೊಂದಿಸುವ ಅಧಿಕಾರಿಗಳ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ಯಾವುದೇ ಜನಪ್ರಿಯ ಯೋಜನೆ ಗಳನ್ನೂ ರದ್ದುಪಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಯಾವ, ಯಾವ ಯೋಜನೆಗಳಿಂದ ಹಣ ಉಳಿತಾಯ ಮಾಡಿ ಅದನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಬಹುದು ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
‘ನಮ್ಮ ಸರ್ಕಾರ ಆರಂಭಿಸಿದ ಯೋಜನೆಗಳನ್ನು ರದ್ದು ಮಾಡಿದರೆ ಹೋರಾಟ ನಡೆಸಬೇಕಾದಿತು’ ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಜಿ.ಪರಮೇಶ್ವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
‘ಅನ್ನಭಾಗ್ಯ ಯೋಜನೆಗೆ ಅನುದಾನ ಬಿಡುಗಡೆ ಕಡತಕ್ಕೆ ಈಗಾಗಲೇ ಸಹಿ ಮಾಡಲಾಗಿದೆ’ ಎಂದು ಸಿ.ಎಂ ತಿಳಿಸಿದ್ದಾರೆ.