ADVERTISEMENT

ಮಹಾನಗರದ ಮೂರು ಕೆರೆಗಳ ಜೀರ್ಣೋದ್ಧಾರ; ನೀರಿನ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿದ RCB

ಪಿಟಿಐ
Published 19 ಏಪ್ರಿಲ್ 2024, 12:33 IST
Last Updated 19 ಏಪ್ರಿಲ್ 2024, 12:33 IST
<div class="paragraphs"><p>ಆರ್‌ಸಿಬಿ ಅಭಿವೃದ್ಧಿಪಡಿಸಿದ ಕೆರೆ</p></div>

ಆರ್‌ಸಿಬಿ ಅಭಿವೃದ್ಧಿಪಡಿಸಿದ ಕೆರೆ

   

ಬೆಂಗಳೂರು: ಕಳೆದ ಕೆಲ ತಿಂಗಳಿಂದ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಬೆಂಗಳೂರಿನ ಮೂರು ಪ್ರಮುಖ ಕೆರೆಗಳ ಜೀರ್ಣೋದ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಡೆಸಿದೆ.

ಇಂಡಿಯಾ ಕೇರ್ಸ್ ಫೌಂಡೇಷನ್ ಜತೆಗೂಡಿ ಕೈಗೊಂಡಿರುವ ಈ ಜಾಗೃತಿ ಕಾರ್ಯದ ಭಾಗವಾಗಿ, 10 ಎಕರೆ ವಿಸ್ತೀರ್ಣದ ಇಟ್ಟಗಲ್‌ಪುರ ಕೆರೆ,  ಸಾದೇನಹಳ್ಳಿ ಕೆರೆ ಮತ್ತುು ಕಣ್ಣೂರು ಕೆರೆಗಳ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಆರ್‌ಸಿಬಿ ಪೂರ್ಣಗೊಳಿಸಿದೆ ಎಂದು ಪ್ರತಿಷ್ಠಾನದ ವರದಿ ತಿಳಿಸಿದೆ.

ADVERTISEMENT

‘ಪರಿಸರ ಸುರಕ್ಷತೆಯ ಭಾಗವಾಗಿ ಆರ್‌ಸಿಬಿ ತಂಡವು ಕೆರೆ ಅಭಿವೃದ್ಧಿ ಕಾರ್ಯವನ್ನು ಕಳೆದ ಅಕ್ಟೋಬರ್‌ನಲ್ಲಿ ಕೈಗೆತ್ತಿಕೊಂಡಿತ್ತು. ಈ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಆಗುತ್ತಿರಲಿಲ್ಲ. ಜತೆಗೆ ಈ ಭಾಗದ ಕೊಳವೆ ಬಾವಿ ಮತ್ತು ಅಂತರ್ಜಲ ಮಟ್ಟವೂ ಈ ಕೆರೆಗಳನ್ನೇ ಅವಲಂಬಿಸಿದ್ದವು. ಈ ನಿಟ್ಟಿನಲ್ಲಿ ಇದರ ಜೀರ್ಣೊದ್ಧಾರಕ್ಕೆ ಕೈಹಾಕಲಾಗಿದೆ’ ಎಂದು ಆರ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಜೀರ್ಣೋದ್ಧಾರ ಸಂದರ್ಭದಲ್ಲಿ ಇಟ್ಟಗಲ್‌ಪುರ ಹಾಗೂ ಸಾದೇನಹಳ್ಳಿ ಕೆರೆಗಳಿಂದ ಸುಮಾರು 1.2 ಲಕ್ಷ ಟನ್ ಹೂಳನ್ನು ಹೊರಕ್ಕೆ ತೆಗೆಯಲಾಗಿದೆ. ಈ ಹೂಳನ್ನು ಕೆರೆಯ ಮೇಲ್ದಂಡೆ ಹಾಗೂ ನಡಿಗೆ ಪಥ ನಿರ್ಮಾಣಕ್ಕೆ ಬಳಸಲಾಗಿದೆ. 52 ರೈತರು ತಮ್ಮ ಹೊಲಕ್ಕೆ ಈ ಹೂಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಕೆರೆಯ ಅಂಗಳವೀಗ 17 ಎಕರೆಯಷ್ಟು ನೀರು ಹಿಡಿಸುವ ಸಾಮರ್ಥ್ಯಕ್ಕೆ ಹಿಗ್ಗಿದೆ.

‘ಕಣ್ಣೂರು ಕೆರೆಯ ದಂಡೆ ಮೇಲೆ ಔಷಧೀಯ ಸಸ್ಯಗಳನ್ನು ನೆಡಲಾಗಿದೆ. ಬಿದಿರಿನ ಉದ್ಯಾನ ನಿರ್ಮಿಸಲಾಗಿದೆ. ಚಿಟ್ಟೆಯ ಉದ್ಯಾನವೂ ಈಗ ಗಮನ ಸೆಳೆಯುವುದರ ಜತೆಗೆ, ಜೀವವೈವಿಧ್ಯವನ್ನು ಹೆಚ್ಚಿಸಿದೆ. ಇದರ ಮೂಲಕ ನಮ್ಮ ಸ್ಥಳೀಯ ಜನರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನ ಪ್ರಮುಖ ಕೆರೆಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವು ಸುತ್ತಲಿನ ಕೆರೆಗಳ ಅಂತರ್ಜಲ ಮಟ್ಟ ಹೆಚ್ಚಿಸುವುದು ಮತ್ತು ಸ್ಥಳೀಯ ಜೀವಿಗಳ ಬದುಕಿಗೆ ನೆರವಾಗುವ ಪ್ರಯತ್ನ ಇದಾಗಿದೆ’ ಎಂದೂ ಆರ್‌ಸಿಬಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.