ADVERTISEMENT

ಮಹದೇಶ್ವರ ಬೆಟ್ಟ: ಮತದಾನಕ್ಕೆ ಮುಂದಾಗದ ಕಾಡಂಚಿನ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:24 IST
Last Updated 26 ಏಪ್ರಿಲ್ 2024, 4:24 IST
<div class="paragraphs"><p>ವಿದ್ಯುನ್ಮಾನ ಮತಯಂತ್ರ </p></div>

ವಿದ್ಯುನ್ಮಾನ ಮತಯಂತ್ರ

   

(ಸಾಂಕೇತಿಕ ಚಿತ್ರ)

ಹನೂರು (ಚಾಮರಾಜನಗರ): ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಜನರು ಮತದಾನದಿಂದ ದೂರ ಉಳಿದಿದ್ದಾರೆ.

ADVERTISEMENT

ಇಂಡಿಗನತ್ತ, ಮೆಂದಾರೆ, ಪಡಸಲನತ್ತ, ತುಳಸಿಕೆರೆ ಹಾಗೂ ತೇಕಾಣೆ(ನಾಗಮಲೆ) ಗ್ರಾಮಗಳ ಜನರು ಇಬೆಳಿಗ್ಗೆಯಿಂದ ಮತಗಟ್ಟೆ ಕೆಂದ್ರಗಳ ಹತ್ತಿರ ಸುಳಿದಿಲ್ಲ.

‘ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಮ್ಮ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಇಲ್ಲದಿದ್ದರೆ ಲೊಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿ ಪ್ರತಿಭಟನೆ ನಡೆಸಿದ್ದರು.

ಕೂಡಲೇ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದರು.

‘ಸ್ವಾತಂತ್ರ್ಯ ಬಂದಾಗಿನಿಂದಲೂ ಮಹದೇಶ್ವರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕನಿಷ್ಠ ಮೂಲಸೌಕರ್ಯದಿಂದಲೂ ವಂಚಿತಗೊಂಡಿವೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಂಬುದು ಇಲ್ಲಿನ ಜನರಿಗೆ ಮರೀಚಿಕೆಕಯಾಗಿಯೇ ಉಳಿದಿದೆ. ಇದರ ಬಗ್ಗೆ ಇದುವರೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ನಮಗೆ ಸೌಲಭ್ಯ ಕಲ್ಪಿಸಲಾಗಿಲ್ಲ. ಚುನಾವಣೆ ಬಂದಾಗಲೆಲ್ಲಾ ನಾವು ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದಾಗಿ ಸ್ಥಳಕ್ಕೆ ಅಧಿಕಾರಿಗಳು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತ ತಿರುಗಿಯೂ ನೋಡುವುದಿಲ್ಲ. ಇದರಿಂದ ಬೇಸತ್ತು ಈ ಬಾರಿ ಮತದಾನ ಮಾಡಲೇಬಾರದು ಎಂದು ಐದು ಗ್ರಾಮಗಳ ಜನರು ದೃಢಸಂಕಲ್ಪ ಮಾಡಿದ್ದೇವೆ’ ಎಂದು ಇಂಡಿಗನತ್ತ ಗ್ರಾಮದ ಪುಟ್ಟಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಉಳಿದೆಡೆ ಮತದಾನ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ ತಾಲ್ಲೂಕಿನ ಬೇಡಗುಳಿಗಳ ಸೋಲಿಗರು ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿದ್ದರು. ಹಾಗಾಗಿ ಗಿರಿಜನರು ಮತದಾನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.