ADVERTISEMENT

ದಣ್ಣೂರು: ನರೇಗಾ ಕೆಲಸದ ವೇಳೆ ಕಾರ್ಮಿಕ ಸಾವು

ಶಾಸಕ ಬಿ.ಆರ್.ಪಾಟೀಲ ಸ್ಥಳಕ್ಕೆ ಭೇಟಿ, ಪರಿಹಾರಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:27 IST
Last Updated 28 ಮಾರ್ಚ್ 2024, 15:27 IST
ಆಳಂದ ತಾಲ್ಲೂಕಿನ ದಣ್ಣೂರು ಗ್ರಾಮದಲ್ಲಿ ಮೃತ ಕಾರ್ಮಿಕನ ಕುಟುಂಬಕ್ಕೆ ಶಾಸಕ ಬಿ.ಆರ್.‌ಪಾಟೀಲ ಸಾಂತ್ವನ ಹೇಳಿದರು
ಆಳಂದ ತಾಲ್ಲೂಕಿನ ದಣ್ಣೂರು ಗ್ರಾಮದಲ್ಲಿ ಮೃತ ಕಾರ್ಮಿಕನ ಕುಟುಂಬಕ್ಕೆ ಶಾಸಕ ಬಿ.ಆರ್.‌ಪಾಟೀಲ ಸಾಂತ್ವನ ಹೇಳಿದರು    

ಆಳಂದ: ತಾಲ್ಲೂಕಿನ ದಣ್ಣೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕ ಶರಣಪ್ಪ ಪ್ರಭು ಬೊಲ್ಡೆ(44) ಬುಧವಾರ ಹೃದಯಾಘಾತದಿಂದ ಮೃತರಾಗಿದ್ದಾರೆ.

ದಣ್ಣೂರು ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಕೆರೆ ಹೂಳೆತ್ತಲು ನೂರಾರು ಕಾರ್ಮಿಕರೊಂದಿಗೆ ಬೆಳಗ್ಗೆ ತೆರಳಿದರು. ಕೆಲಸದ ವೇಳೆಯೇ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ  ಸಮೀಪದ ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕನಿಗೆ ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ಪರಿಹಾರಕ್ಕೆ ಕ್ರಮ: ಘಟನೆ ಸುದ್ದಿ ತಿಳಿದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ದಣ್ಣೂರು ಗ್ರಾಮಕ್ಕೆ ಭೇಟಿ ನೀಡಿ, ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಪಿಡಿಒ ಪ್ರವೀಣ ಉಡಗಿ ಅವರಿಗೆ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಉದ್ಯೋಗ ಖಾತ್ರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ, ಕುಡಿಯುವ ನೀರು, ಟೆಂಟ್‌ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ADVERTISEMENT

‘ಉದ್ಯೋಗ ಖಾತ್ರಿ ಯೋಜನೆಯಡಿ ಮೃತ ಕಾರ್ಮಿಕನ ಕುಟುಂಬಕ್ಕೆ ₹2 ಲಕ್ಷ ಪರಿಹಾರ ದೊರಕಲಿದೆ’ ಎಂದು ತಾ.ಪಂ. ಇಒ ಚಂದ್ರಶೇಖರ ಪವಾರ ತಿಳಿಸಿದರು. ಮುಖಂಡ ಭೀಮಾಶಂಕರ ಪಾಟೀಲ ಸೇರಿದಂತೆ ಕಾರ್ಮಿಕರು ಹಾಜರಿದ್ದರು.

ಶರಣಪ್ಪ ಪ್ರಭು ಬೊಲ್ಡೆ ಮೃತ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.