ರಾಮನಗರ: ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ರಾಮನಗರ ಎಸ್.ಪಿ. ಸಂತೋಷ್ ಬಾಬು ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೊಬೈಲ್ ಕರೆ ಮಾಡಿ ವಾಗ್ದಾಳಿ ನಡೆಸಿದರು.
‘ರಾಮನಗರದಲ್ಲಿ ನಿನ್ನೆ ಹೊಲದಲ್ಲಿ ಕೆಲಸ ಮಾಡಿ ಕುಡಿಯಲು 20 ಬಾಟೆಲ್ ಮದ್ಯ ಇಟ್ಟುಕೊಂಡಿದ್ದಕ್ಕೆ ರೈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಿ. ಅದೇ ನಿಮ್ಮ ಗೋವಿಂದರಾಜು ಎನ್ನುವ ಸಿಬ್ಬಂದಿ 500 ಬಾಟೆಲ್ ಜೊತೆ ಸಿಕ್ಕಿಬಿದ್ದವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾನೆ. ಒಬ್ಬರಿಗೊಂದು ನ್ಯಾಯ ಮಾಡ್ತೀರಾ’ಎಂದು ಹರಿಹಾಯ್ದರು.
‘ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಡಿ. ಪಕ್ಷಾತೀತವಾಗಿ ಕೆಲಸ ಮಾಡಿ. ಇಲ್ಲದಿದ್ರೆ ನಾನು ವಿಧಾನಸಭೆಯಲ್ಲೇ ಈ ಬಗ್ಗೆ ಮಾತನಾಡುತ್ತೇನೆ’ಎಂದು ಎಚ್ಚರಿಕೆ ನೀಡಿದರು.
ಕಾರಣ ಏನು?: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪದ ಮೇಲೆ ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯ ಪ್ರಸನ್ನ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ದೂರಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾಧ್ಯಮಗಳ ಎದುರೇ ಎಸ್ಪಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.