ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಬಿಜೆಪಿಯ ಕೂಗು, ಸಂವಿಧಾನ ಬದಲಿಸಬೇಕೆಂಬ ಅವರ ಬಯಕೆಯನ್ನು ತೋರಿಸುತ್ತದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮುನ್ನ ಜೈರಾಮ್ ಅವರು ‘ಎಕ್ಸ್’ನಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
‘ಮಹಾರಾಷ್ಟ್ರದ ವಾರ್ಧಾಗೆ ತೆರಳುತ್ತಿರುವ ಪ್ರಧಾನಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ: ರೈತರ ಆತ್ಮಹತ್ಯೆ ತಡೆಯಲು ಪ್ರಧಾನಿ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಬಿಜೆಪಿಯು ಆದಿವಾಸಿಗಳಿಗೆ ನಿರಾಸೆ ಉಂಟುಮಾಡಿರುವುದು ಏಕೆ? ಮಹಾತ್ಮಾ ಗಾಂಧಿ ಮತ್ತು ಗೋಡ್ಸೆ – ಇವರಲ್ಲಿ ಯಾರ ಪರ ನಿಲ್ಲುವಿರಿ? ಎಂದು ಪೋಸ್ಟ್ ಮಾಡಿದ್ದಾರೆ.
‘ಬಿಜೆಪಿಯ ಕೆಲವು ನಾಯಕರು ಮಹಾತ್ಮಾ ಗಾಂಧಿ ಅವರನ್ನು ನಿಂದಿಸಿದ್ದಾರೆ. ಮತ್ತೆ ಕೆಲವರು, ಗೋಡ್ಸೆ ಮತ್ತು ಗಾಂಧಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ ಎಂದಿದ್ದಾರೆ. ಬಿಜೆಪಿಯ ‘ಅಬ್ ಕಿ ಬಾರ್ 400 ಪಾರ್’ ಘೋಷಣೆಯು ಸಂವಿಧಾನ ಬದಲಾಯಿಸುವ ಬಯಕೆಯನ್ನು ಸೂಚಿಸುತ್ತದೆ. ಬಿಜೆಪಿ ನಾಯಕರು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವುದು ಏಕೆ? ಈ ಬಗ್ಗೆ ಮೋದಿ ಮೌನ ಮುರಿಯಬೇಕು’ ಎಂದು ಹೇಳಿದ್ದಾರೆ.
‘ಬಿಜೆಪಿ ಅತಿದೊಡ್ಡ ಸುಳ್ಳುಗಾರ’
ನೊಯ್ಡಾ: ‘ಬಹುಶಃ ಬಿಜೆಪಿಯಷ್ಟು ಸುಳ್ಳುಗಳನ್ನು ಯಾವ ರಾಜಕೀಯ ಪಕ್ಷವೂ ಹೇಳಿಲ್ಲ. ಬಿಜೆಪಿಯು ಇಡೀ ವಿಶ್ವದಲ್ಲೇ ಅತಿದೊಡ್ಡ ಸುಳ್ಳುಗಾರ’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಟೀಕಿಸಿದರು.
ನೊಯ್ಡಾದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಬಿಜೆಪಿಯು ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆ. ಮೊದಲ ಹಂತದ ಮತದಾನದಲ್ಲೇ ಅದರ ಮುನ್ಸೂಚನೆ ಲಭಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.