ಬೆಂಗಳೂರು: ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ರಾತ್ರಿ ನಗರದ ಬೊಮ್ಮನಹಳ್ಳಿಯಲ್ಲಿ ರೋಡ್ ಶೋ ನಡೆಸಿ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
ಬೊಮ್ಮನಹಳ್ಳಿಯ ವಿವೇಕಾನಂದ ಸರ್ಕಲ್ನಿಂದ ಬನ್ನೇರುಘಟ್ಟ ರಸ್ತೆಯ ಐಐಎಂಬಿವರೆಗೆ ರಾತ್ರಿ ರೋಡ್ಶೋ ನಡೆಯಿತು. ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ರಥದ ಮಾದರಿಯ ವಾಹನದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಸೇರಿದ್ದ ಜನಸ್ತೋಮಕ್ಕೆ ಕೈ ಬೀಡುತ್ತಾ, ಹೂವಿನ ಪಕಳೆಗಳನ್ನು ಎಸೆಯುತ್ತಾ ಸಾಗಿದರು. ಸುಮಾರು 50 ನಿಮಿಷ ರೋಡ್ ಶೋ ನಡೆಯಿತು.
ನಿಗದಿತ ಸಮಯಕ್ಕಿಂತ ತಡವಾಗಿಯೇ ರೋಡ್ ಶೋ ಆರಂಭವಾಯಿತು. ಆದರೂ ಜನ ಅಮಿತ್ ಶಾ ಅವರನ್ನು ಕಣ್ತುಂಬಿಕೊಳ್ಳಲು ಕಾದು ನಿಂತಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಡಿಜೆ ಮೂಲಕ ‘ಮೋದಿ’ ಕುರಿತ ಕನ್ನಡ ಹಾಡು ಅನುರಣಿಸಿತು. ’ಭಾರತ್ ಮಾತಾಕೀ ಜೈ’, ‘ಜೈ ಶ್ರೀರಾಮ್’, ‘ಜೈ ಮೋದಿ’, ‘ಜೈ ಅಮಿತ್ ಶಾ’ ಮುಂತಾದ ಘೋಷಣೆಗಳು ಮುಗಿಲು ಮುಟ್ಟಿತ್ತು.
ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲು ಒಂದು ದಿನ ಬಾಕಿ ಇರುವಂತೆ ನಡೆಸಿದ ರೋಡ್ ಶೋ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬಿತು. ಹನುಮ ಜಯಂತಿಯ ವಿಶೇಷವಾಗಿ ಹನುಮ ವೇಷಧಾರಿಗಳೂ ಜನರ ಜತೆ ಹೆಜ್ಜೆ ಹಾಕಿದರು. ರಸ್ತೆಯ ಕೆಲವು ಕಡೆಗಳಲ್ಲಿ ವಿವಿಧ ಕಲಾ ತಂಡಗಳು ಗೃಹಸಚಿವರನ್ನು ಸ್ವಾಗತಿಸಿದವು. ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ರಾಷ್ಟ್ರೀಯ ಮಟ್ಟದ ನಾಯಕರೊಬ್ಬರು ನಗರದಲ್ಲಿ ರೋಡ್ ಶೋ ಇದೇ ಮೊದಲು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.