ADVERTISEMENT

ಚೊಂಬು ನೀರು ಕೊಡಲಾಗದ ಸರ್ಕಾರ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 13:59 IST
Last Updated 20 ಏಪ್ರಿಲ್ 2024, 13:59 IST
ತುಮಕೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಓಂಕಾರ್, ಮುಖಂಡರಾದ ಮುನಿರಾಜು, ಗಂಗಮ್ಮ ಆನಂದಕುಮಾರ್, ಧನಲಕ್ಷ್ಮಿ ನಟರಾಜು ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಓಂಕಾರ್, ಮುಖಂಡರಾದ ಮುನಿರಾಜು, ಗಂಗಮ್ಮ ಆನಂದಕುಮಾರ್, ಧನಲಕ್ಷ್ಮಿ ನಟರಾಜು ಇತರರು ಉಪಸ್ಥಿತರಿದ್ದರು   

ತುಮಕೂರು: ಬರಗಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಜನರಿಗೆ ಒಂದು ಚೊಂಜು ನೀರು ಕೊಡಲು ಸಾಧ್ಯವಾಗದ ರಾಜ್ಯ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರ ಟೀಕಿಸಲು ಚೊಂಜಿನ ಜಾಹೀರಾತು ನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಟೀಕಿಸಿದರು.

ನಗರದಲ್ಲಿ ಶನಿವಾರ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಕಲ್ಲು ಒಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಲಜೀವನ್ ಮಿಷನ್‍ ಯೋಜನೆಯಲ್ಲಿ ಹಳ್ಳಿಗಳ ಮನೆಗಳಿಗೆ ಕುಡಿಯುವ ನೀರು ನೀಡುತ್ತಿದೆ. ಕಾಂಗ್ರೆಸ್ ಕಾರ್ಯಕ್ರಮಗಳಿಗೂ ಮೋದಿ ಸರ್ಕಾರದ ಕಾರ್ಯಕ್ರಮಗಳಿಗೂ ಇರುವ ವ್ಯತ್ಯಾಸವಿದು ಎಂದರು.

ADVERTISEMENT

ಅನ್ನಭಾಗ್ಯ ಯೋಜನೆ ನೀಡಿ ಜನರನ್ನು ಹಸಿವು ಮುಕ್ತಗೊಳಿಸಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ. ಇವರು ಒಂದು ಕೆ.ಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಈಗ ಕೊಡುತ್ತಿರುವ 5 ಕೆ.ಜಿ ಅಕ್ಕಿ ಮೋದಿ ಸರ್ಕಾರದ ಕೊಡುಗೆ. ಅಕ್ಕಿ ಮೋದಿಯವರದ್ದು, ಚೀಲ ಸಿದ್ದರಾಮಯ್ಯ ಅವರದ್ದು ಎಂದು ಲೇವಡಿ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ ಅಮಾನವೀಯ. ಹಿಂದುಗಳಿಗೆ ಈ ರಾಷ್ಟ್ರ ಬಿಟ್ಟರೆ ಬೇರೆಲ್ಲೂ ಜಾಗವಿಲ್ಲ. ದೇಶದ ಜನರ ರಕ್ಷಣೆಗೆ, ಗೌರವಯುತವಾಗಿ ಬದುಕಲು ಮೋದಿ ಇರಲೇಬೇಕು. ಅದಕ್ಕಾಗಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಓಂಕಾರ್, ‘ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರ ವಿಚಾರವಿರಲಿ, ಜನನಾಯಕರಿಗೂ ರಕ್ಷಣೆ ಇಲ್ಲವಾಗಿದೆ. 2020ರಲ್ಲಿ ನಮ್ಮ ಭೋವಿ ಸಮಾಜದ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಅಲ್ಪಸಂಖ್ಯಾತ ದುಷ್ಕರ್ಮಿಗಳು ನುಗ್ಗಿ ಬೆಂಕಿ ಹಚ್ಚಿದರು. ತಮ್ಮದೇ ಪಕ್ಷದ ಶಾಸಕರನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಲಿಲ್ಲ. ಆರೋಪಿಗಳ ಪರವಾಗಿ ಪಕ್ಷದ ಅಧ್ಯಕ್ಷರು ಮಾತನಾಡಿದರು. ಇಂತಹ ಪಕ್ಷಕ್ಕೆ ಭೋವಿ ಸಮಾಜದವರು ಒಂದು ವೋಟನ್ನೂ ಹಾಕಬಾರದು’ ಎಂದು ಕೇಳಿಕೊಂಡರು.

ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್ ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ಆನಂದಕುಮಾರ್, ಧನಲಕ್ಷ್ಮಿ ನಟರಾಜು, ಮುಖಂಡರಾದ ಶಿವಕುಮಾರ್, ಆಶಾ ತ್ರಿಲೋಚನ್, ಮಂಜುನಾಥ್, ವಿಶ್ವನಾಥ್, ಜಯಚಂದ್ರಪ್ಪ, ಪುರುಷೋತ್ತಮ್, ಮುನೇಶ್, ಕೃಷ್ಣಮೂರ್ತಿ, ರಂಗಸ್ವಾಮಿ, ಚಂದ್ರಣ್ಣ, ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.