ಲಿಂಗಸುಗೂರು (ರಾಯಚೂರು ಜಿಲ್ಲೆ): ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ₹ 500 ಮುಖ ಬೆಲೆಯ ನೋಟಿನ 62 ಬಂಡಲ್ ಜಪ್ತಿ ಮಾಡಿದ್ದಾರೆ.
ಎಸ್ಟಿಎಫ್ ತಂಡದ ಮುಖ್ಯಸ್ಥ ವಿಜಯಕುಮಾರ, ಅಬಕಾರಿ ಇನ್ಸ್ಪೆಕ್ಟರ್ ಪಾಂಡುರಂಗ ನೇತೃತ್ವದಲ್ಲಿ ಗೌಳಿಪುರದ ಚೋಟುಸಾಬ ಉರ್ಫ್ ಚಟ್ಯಾ ಮನೆ ಮೇಲೆ ದಾಳಿ ನಡೆದಾಗ ₹ 500 ಮುಖ ಬೆಲೆಯ ಝರಾಕ್ಷ್ ನೋಟುಗಳು ಪತ್ತೆಯಾಗಿದೆ.
ಮೆಟಲ್ ಬಾಕ್ಸ್ನಲ್ಲಿ ₹ 500 ನೋಟುಗಳ ಬಂಡಲ್ ಸಿಕ್ಕಾಗ ಅಧಿಕಾರಿಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದರು. ನೋಟಿನ ಅಳತೆಯಲ್ಲೇ ದಿನಪತ್ರಿಕೆಗಳನ್ನು ಕಟ್ ಮಾಡಿ ₹ 500 ಮುಖ ಬೆಲೆಯ ಝರಾಕ್ಸ್ ತೆಗೆದು ಬಂಡಲ್ ಮೇಲೆ ಹಾಗೂ ಕೆಳಗೆ ಇಟ್ಟು ಸಂಶಯ ಬಾರದಂತೆ ಕಟ್ಟಿ ಇಡಲಾಗಿತ್ತು. ಅಂತಹ 62 ಬಂಡಲ್ಗಳು ದೊರಕಿವೆ.
ಅಬಕಾರಿ ಇನ್ಸ್ಪೆಕ್ಟರ್ ಪಾಂಡುರಂಗ ಅಬಕಾರಿ ದಾಳಿ ನಡೆಸಿದಾಗ ನೋಟಿನ ಬಂಡಲ್ ಪತ್ತೆ ಆಗಿವೆ. ನಕಲಿ ನೋಟು ಬಳಸಿ ವಂಚಿಸುವ ಉದ್ದೇಶ ಹೊಂದಿರಬಹುದು. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಭಾರಿ ಪ್ರಮಾಣದಲ್ಲಿ ನಗದು ಇರಿಸಲಾಗಿದೆ ಎನ್ನುವ ವದಂತಿ ಗುರುವಾರ ರಾತ್ರಿ ಹರಡಿತ್ತು. ತಡ ರಾತ್ರಿ ಶೋಧ ಕಾರ್ಯ ನಡೆದಾಗ ಝರಾಕ್ಸ್ ನೋಟುಗಳು ಪತ್ತೆಯಾಗಿವೆ. ಪೊಲೀಸ್ ಇನ್ಸ್ಪೆಕ್ಟರ್ ಪುಂಡಲಿಕ ಪಟತರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.