ADVERTISEMENT

ಪ್ರಧಾನಿಯಾಗಲು ಕಾಂಗ್ರೆಸ್‌ನಲ್ಲಿ ಹಲವರು ಇದ್ದಾರೆ: ಸಿದ್ದರಾಮಯ್ಯ

ರಾಹುಲ್, ಖರ್ಗೆ ಪ್ರಧಾನಿ ಸ್ಥಾನಕ್ಕೆ ಅರ್ಹರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:58 IST
Last Updated 23 ಏಪ್ರಿಲ್ 2024, 15:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ತುಮಕೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೊರ ವಲಯದ ಯಲ್ಲಾಪುರದಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಾನಿಯಾಗಲು ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ? ಎಂದು ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡ ಪ್ರಶ್ನಿಸುತ್ತಾರೆ. ನರೇಂದ್ರ ಮೋದಿ ಬಿಟ್ಟರೆ ಈ ದೇಶದಲ್ಲಿ ಪ್ರಧಾನಿಯಾಗುವ ಅರ್ಹರು ಯಾರು ಇಲ್ಲ ಎನ್ನುತ್ತಾರೆ. ನಮ್ಮಲ್ಲಿ ಸಾಕಷ್ಟು ಮುಖಂಡರಿದ್ದಾರೆ. ರಾಹುಲ್, ಖರ್ಗೆ ಏಕೆ ಪ್ರಧಾನಿಯಾಗಬಾರದು. ಮೋದಿ ಮೆಚ್ಚಿಸಲು, ಸ್ವಾರ್ಥಕ್ಕಾಗಿ ಗೌಡರು ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದರು.

ADVERTISEMENT

ಸುಳ್ಳು ಹೇಳಲು ಹಾಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪೈಪೋಟಿ ನಡೆಸಿದ್ದಾರೆ. ಮೋದಿ ಸುಳ್ಳು ಹೇಳಿದರೆ, ದೇವೇಗೌಡರು ಅದಕ್ಕಿಂತ ಹೆಚ್ಚು ಸುಳ್ಳು ಹೇಳುತ್ತಿದ್ದಾರೆ. ಜನರ ಮುಂದೆ ಸುಳ್ಳು ಹೇಳಿ ಇಬ್ಬರು ಮಾನ, ಮರ್ಯಾದೆ ಇಲ್ಲದಂತೆ ಮಾಡಿಕೊಂಡಿದ್ದಾರೆ. ಗೌಡರ ಯೋಗ್ಯತೆಗೆ ತಕ್ಕಂತೆ ಮಾತನಾಡುತ್ತಿಲ್ಲ. ನಾವು ಸತ್ಯ ಹೇಳುತ್ತಿದ್ದೇವೆ. ಅವರಂತೆ ಸುಳ್ಳು ಹೇಳುತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಕೊಟ್ಟ ಭರವಸೆ ಈಡೇರಿಸದೆ, ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಪ್ರಧಾನಿಯಾಗಿರಲು ನಾಲಾಯಕ್. ಕಪ್ಪು ಹಣ ತರಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ, ಬೆಲೆ ಏರಿಕೆ ತಡೆಯಲಿಲ್ಲ. ರಾಜ್ಯವನ್ನು ನಿರ್ಲಕ್ಷ್ಯಿಸಿ, ಸತತವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಹತ್ತು ವರ್ಷಗಳ ಕಾಲ ಸುಳ್ಳು ಹೇಳಿದ್ದೇ ಸಾಧನೆ. ಇಂತಹವರು ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.