ಮಡಿಕೇರಿ: ’ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಆಹ್ವಾನವನ್ನೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿರಾಕರಿಸಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದರು.
ಇಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಬಿಜೆಪಿ ಯದುವೀರ್ ಅವರಿಗೆ ಟಿಕೆಟ್ ಘೋಷಿಸುವ ಮುನ್ನಾ ದಿನ ದೂರವಾಣಿ ಕರೆ ಮಾಡಿದ್ದ ಸಿಎಂ ಮತ್ತು ಡಿಸಿಎಂ, ರಾಜಕಾರಣದಲ್ಲಿ ಆಸಕ್ತಿ ಇದ್ದರೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವುದಾಗಿ ಹೇಳಿದ್ದರು. ಅವರಿಗೆ ಪ್ರತಿಕ್ರಿಯಿಸಿದ್ದ ಯದುವೀರ್, ರಾಜಕಾರಣದಲ್ಲಿ ಆಸಕ್ತಿ ಇದೆ ಎಂದು ಸ್ಪರ್ಧಿಸುತ್ತಿಲ್ಲ. ನರೇಂದ್ರ ಮೋದಿ ಅವರ ಅಪೇಕ್ಷೆಯ ಮೇರೆಗೆ ದೇಶದ ಸೇವೆಗೆ ಬರುತ್ತಿದ್ದೇನೆ ಎಂದಿದ್ದರು’ ಎಂದು ವಿಜಯೇಂದ್ರ ತಿಳಿಸಿದರು.
ಯದುವೀರ್ ಮಾತನಾಡಿ, ‘ಮೋದಿ ಅವರ ಅಪೇಕ್ಷೆಯಂತೆ ಅಭ್ಯರ್ಥಿಯಾಗಿದ್ದೇನೆ. ನಮ್ಮ ಪೂರ್ವಿಕರ ಆಡಳಿತವು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಸುವರ್ಣಯುಗ ಎನಿಸಿತ್ತು. ಹಾಗೆಯೇ, ನರೇಂದ್ರ ಮೋದಿ ಅವರ ಆಡಳಿತವೂ ಈಗ ಸುವರ್ಣಯುಗ ಎನಿಸಿದೆ’ ಎಂದರು.
‘ಹಾಲಿ ಸಂಸದ ಪ್ರತಾಪಸಿಂಹ ಅವರಿಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ. ನಾನು ಅಧ್ಯಕ್ಷನಾಗಿರುವವರೆಗೂ ಅವರ ಭವಿಷ್ಯದ ಕುರಿತು ಚಿಂತನೆ ಮಾಡುತ್ತೇನೆ’ ಎಂದು ವಿಜಯೇಂದ್ರ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.