ಪ್ರಣಿತಿ ಶಿಂದೆ: ಕಾಂಗ್ರೆಸ್
ಮಹಾರಾಷ್ಟ್ರದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್, ಈ ಬಾರಿ ಹಾಲಿ ಶಾಸಕರನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್ ಪಕ್ಷವು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಶಾಸಕಿ ಹಾಗೂ ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಮಗಳು ಪ್ರಣಿತಿ ಶಿಂದೆ ಅವರನ್ನು ಅಖಾಡಕ್ಕಿಳಿಸಿದೆ.
ಇವರು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ಸ್ಥಳೀಯವಾಗಿಯೂ ಪ್ರಭಾವಿ ನಾಯಕಿಯಾಗಿದ್ದಾರೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷೆಯಾಗಿರುವ ಪ್ರಣಿತಿ ಅವರು ಸಾಮಾಜಿಕ ಕಾರ್ಯಕರ್ತೆಯಾಗಿಯೂ ಕಾರ್ಯನಿರ್ವಹಿಸಿದವರು. ಈ ಕಾರಣಕ್ಕೆ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ.
‘ಮಹಾ ವಿಕಾಸ ಅಘಾಡಿಯ’ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ ಇವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿದೆ. 2009ರಲ್ಲಿ ಸುಶೀಲ್ ಕುಮಾರ್ ಶಿಂದೆ ಅವರು ಈ ಕ್ಷೇತ್ರದಿಂದ ಗೆದ್ದಿದ್ದರು.
ರಾಮ್ ಸತ್ಪುತೆ: ಬಿಜೆಪಿ
ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಪ್ರಣಿತಿ ಶಿಂದೆ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯು ಮಾಲ್ಶಿರಸ್ ಕ್ಷೇತ್ರದ ಶಾಸಕ ರಾಮ್ ಸತ್ಪುತೆ ಅವರನ್ನು ಸ್ಪರ್ಧಾ ಕಣಕ್ಕಿಳಿಸಿದೆ. ರಾಮ್ ಅವರು ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರೂ ಹೌದು.
ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರುವ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯ ಪ್ರವೇಶಿಸಿದವರು.
ಎಬಿವಿಪಿಯಲ್ಲಿದ್ದಾಗ ಹಲವು ವಿದ್ಯಾರ್ಥಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದಲ್ಲಿ ನಡೆದ ನಕ್ಸಲ್ ವಿರೋಧಿ ಹೋರಾಟದಲ್ಲಿ ರಾಮ್ ಅವರು ಮುಂಚೂಣಿಯಲ್ಲಿದ್ದರು. 2019ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಜೈಸಿದ್ದೇಶ್ವರ ಸ್ವಾಮೀಜಿ 1,58,608 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸುಶೀಲ್ ಕುಮಾರ್ ಶಿಂದೆ ಅವರನ್ನು ಪರಾಭವಗೊಳಿಸಿದ್ದರು.
2014ರಲ್ಲೂ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯೇ ಗೆದ್ದಿದ್ದರು. ಇದು ರಾಮ್ ಅವರಲ್ಲಿ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.