ಮೊರಾದಾಬಾದ್/ಲಖನೌ: ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೆ ಗೋಮಾಂಸ ತಿನ್ನುವ ಹಕ್ಕನ್ನು ನೀಡಲು ಬಯಸುತ್ತದೆ. ಇದು ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಟೀಕಿಸಿದ್ದಾರೆ.
‘ಈ ನಿರ್ಲಜ್ಜೆಯ ಜನರು ಗೋಮಾಂಸ ತಿನ್ನುವ ಹಕ್ಕು ನೀಡುವ ಭರವಸೆ ಕೊಡುತ್ತಾರೆ. ನಮ್ಮ ಧರ್ಮಗ್ರಂಥಗಳು ಗೋವನ್ನು ತಾಯಿ ಎಂದು ಕರೆದಿವೆ. ಆದರೆ ಅವರು ಗೋವನ್ನು ಕಟುಕರ ಕೈಗೆ ನೀಡಲು ಬಯಸುತ್ತಾರೆ. ನಮ್ಮ ದೇಶ ಇದನ್ನು ಒಪ್ಪಿಕೊಳ್ಳುವುದೇ?’ ಎಂದು ಆದಿತ್ಯನಾಥ್ ಅವರು ಮೊರಾದಾಬಾದ್ ಜಿಲ್ಲೆಯ ಬಿಲಾರಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿರುವುದಾಗಿ ಬಿಜೆಪಿ ಪ್ರಕಟಣೆ ತಿಳಿಸಿದೆ.
‘ಅಲ್ಪಸಂಖ್ಯಾತರಿಗೆ ತಮ್ಮ ಇಚ್ಛೆಯ ಆಹಾರವನ್ನು ತಿನ್ನುವ ಸ್ವಾತಂತ್ರ್ಯ ನೀಡಲು ಕಾಂಗ್ರೆಸ್ನವರು ಬಯಸುವರು. ಅವರು ಗೋಹತ್ಯೆಗೆ ಅವಕಾಶ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದೇ ಅದರ ಅರ್ಥ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈಚೆಗೆ ನೀಡಿದ ಹೇಳಿಕೆ ಪುನರುಚ್ಚರಿಸಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಕಸಿದು ರೋಹಿಂಗ್ಯನ್ನರು ಮತ್ತು ನುಸುಳುಕೋರರಿಗೆ ಹಂಚಲಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.