ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಇ.ಡಿ ಇತ್ತೀಚೆಗೆ ಸಲ್ಲಿಸಿದ ಪ್ರಮಾಣಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಅವರು, ತಾನು ತನಿಖೆಗೆ ಸದಾ ಸಹಕರಿಸಿರುವುದಾಗಿ ಹೇಳಿದ್ದಾರೆ.
ಎಎಪಿ ನಾಯಕರಿಗೆ ಒಂಬತ್ತು ಬಾರಿ ಸಮನ್ಸ್ ನೀಡಿದ್ದರೂ ತನಿಖಾಧಿಕಾರಿ ಮುಂದೆ ಹಾಜರಾಗದಿರುವುದು ಬಂಧನಕ್ಕೆ ಪ್ರಮುಖ ಕಾರಣ ಎಂದು ಇ.ಡಿ ಪ್ರಮಾಣಪತ್ರದಲ್ಲಿ ಹೇಳಿತ್ತು.
ಇ.ಡಿಯ ಪ್ರತಿ ಸಮನ್ಸ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡಲಾಗಿದೆ. ಬರವಣಿ ಮೂಲಕ ಅಥವಾ ವರ್ಚುವಲ್ ಆಗಿ ಪ್ರತಿಕ್ರಿಯಿಸಲು ಅಥವಾ ಹಾಜರಾಗಲು ಅವಕಾಶಗಳು ಇರುವಾಗ ಭೌತಿಕ ಉಪಸ್ಥಿತಿಯನ್ನೇ ಬೇಡುವುದು ಎಷ್ಟು ಸರಿ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಹೀಗಾಗಿ ತಮ್ಮ ಮನವಿ ಪರಿಗಣನೆಗೆ ಅರ್ಹವಾಗಿದ್ದು, ತಕ್ಷಣವೇ ಬಿಡುಗಡೆ ಮಾಡುವಂತೆ ಅವರು ಕೋರಿದ್ದಾರೆ.
‘ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಸಂಚುಕೋರರಾಗಿದ್ದು, ದೊಡ್ಡ ಪ್ರಮಾಣದಲ್ಲಿ ಪಿತೂರಿ ಮಾಡಿದ್ದಾರೆ’ ಎಂಬ ಅಂಶವನ್ನು ಇ.ಡಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿತ್ತು.
ದೆಹಲಿ ಮುಖ್ಯಮಂತ್ರಿ ತಮ್ಮ ಸಚಿವರು ಮತ್ತು ಎಎಪಿ ನಾಯಕರ ಜತೆಗೆ ಶಾಮೀಲಾಗಿ ಈ ಕೆಲಸ ಮಾಡಿದ್ದಾರೆ. ಅಬಕಾರಿ ನೀತಿಯಲ್ಲಿ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಮದ್ಯೋದ್ಯಮಿಗಳಿಂದ ಕಿಕ್ಬ್ಯಾಕ್ ಪಡೆಯುವಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದು ಅದು ಆರೋಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.