ADVERTISEMENT

ವಿಟಿಯು ಮುಚ್ಚಿಬಿಡಿ: ಹೈಕೋರ್ಟ್

ಕುಲಪತಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಬೆಂಗಳೂರು: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಕಾನೂನಿಗೆ ವಿರುದ್ಧವಾಗಿ ಸುತ್ತೋಲೆಗಳನ್ನು ಹೊರಡಿಸಿದ್ದು ಅವರ ನಡೆ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲು ಮಾಡಲು ಅರ್ಹವಾಗಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಎಂಜಿನಿಯರಿಂಗ್‌ ಕೋರ್ಸ್‌ ಮುಗಿಸುವ ನಿಗದಿತ ಅವಧಿ ಮೀರಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಕೋರಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಅಬ್ದುಲ್‌ ನಜೀರ್‌ ಅವರು, ‘ನಿಮಗೆ ಇಷ್ಟ ಬಂದಹಾಗೆ ಸುತ್ತೋಲೆಗಳನ್ನು ಹೊರಡಿಸಲು ಬರೋದಿಲ್ಲ’ ಎಂದು ಕುಲಪತಿಗಳು ಹಾಗೂ ರಿಜಿಸ್ಟ್ರಾರ್‌ ಅವರ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಕುಲಪತಿಗಳ ನಿರ್ದೇಶನದ ಮೇರೆಗೆ ಎಂದು ಸರಣಿ ಸುತ್ತೋಲೆ ಹೊರಡಿಸಿರುವ ಅವರ ವರ್ತನೆ ನೋಡಿದರೆ ವಿಶ್ವವಿದ್ಯಾಲಯವನ್ನು ಮುಚ್ಚುವುದೇ ಒಳಿತು’ ಎಂದು ಮೌಖಿಕಅಭಿಪ್ರಾಯ ವ್ಯಕ್ತಪಡಿಸಿದ ನಜೀರ್, ‘ಇದೇನು ವಿಶ್ವವಿದ್ಯಾಲಯವೋ ಅಥವಾ ಪೊಲೀಸ್‌ ಠಾಣೆಯೋ’ ಎಂದು ಪ್ರಶ್ನಿಸಿದರು.

‘ನಿಗದಿತ ಸಮಯದಲ್ಲಿ ಕೋರ್ಸ್‌ ಮುಗಿಸದ ಈ ಹಿಂದಿನ ಬ್ಯಾಚುಗಳ ವಿದ್ಯಾರ್ಥಿಗಳಿಗೆ ದಂಡ ಕಟ್ಟಿಸಿಕೊಂಡು ಮನಸ್ಸಿಗೆ ಬಂದಂತೆ ಅವಧಿ ವಿಸ್ತರಣೆ ಮಾಡಲಾಗಿದೆ. ಇದನ್ನು ಮಾಡಲು ಕುಲಪತಿಗಳಿಗೆ ಅಧಿಕಾರ ಕೊಟ್ಟವರು ಯಾರು? ಕುಲಪತಿಗಳ ನಿರ್ಧಾರಗಳಿಗೆ ಕಾನೂನಿನ ತಳಹದಿಯೇ ಇಲ್ಲ’ ಎಂದು ನಜೀರ್‌ ಕಿಡಿ ಕಾರಿದರು.

ವಿದ್ಯಾವಿಶ್ವವಿದ್ಯಾಲಯದ ಸುತ್ತೋಲೆಗಳು ಎಂದರೆ ಅದಕ್ಕೊಂದು ಪಾವಿತ್ರ್ಯ ಇರಬೇಕು. ಆದರೆ ಕುಲಪತಿಗಳ ಕಚೇರಿ ಈ ರೀತಿ ನಡವಳಿಕೆ ಹೊಂದಿದೆ ಎಂದರೆ ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರ ಇಂತಹ ವರ್ತನೆ ನಿಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.