ADVERTISEMENT

ದಿಂಗಾಲೇಶ್ವರರು ರಾಜಕೀಯ ಪ್ರವೇಶಿಸಿದ ಸಮಯ, ಜಾಗ ಸರಿಯಿಲ್ಲ- ಗುಣಧರನಂದಿ ಮಹಾರಾಜ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 8:17 IST
Last Updated 17 ಏಪ್ರಿಲ್ 2024, 8:17 IST
   

ಹುಬ್ಬಳ್ಳಿ: 'ಫಕೀರ ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶ ಮಾಡಿದ ಸಮಯ ಮತ್ತು ಜಾಗ ಸರಿಯಿಲ್ಲ. ಇದು ಶಿರಹಟ್ಟಿಯ ಫಕೀರೇಶ್ವರ ಮಹಾಸಂಸ್ಥಾನದ ಅಸ್ತಿತ್ವದ ಪ್ರಶ್ನೆಯಾಗಿದೆ' ಎಂದು ವರೂರು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಅಭಿಪ್ರಾಯಪಟ್ಟರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ದಿಂಗಾಲೇಶ್ವರ ಸ್ವಾಮೀಜಿ ನನ್ನನ್ನು ಸಂಪರ್ಕಿಸಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ರಾಜಕೀಯ ಪ್ರವೇಶಿಸಲು ಸಮಯ ಸರಿಯಿಲ್ಲ. ಧಾರವಾಡ ದೊಡ್ಡ ಲೋಕಸಭಾ ಕ್ಷೇತ್ರವಾಗಿದ್ದು, 546 ಹಳ್ಳಿಗಳನ್ನು ಒಳಗೊಂಡಿದೆ. ಅಲ್ಪ ಸಮಯದಲ್ಲಿ ಹಳ್ಳಿಗಳನ್ನು ಸಂಪರ್ಕಿಸಲು ಅಸಾಧ್ಯ. ಇದು ಅವರಿಗೆ ಕಷ್ಟವಾಗಿ, ಚುನಾವಣೆಯಲ್ಲಿ ಸೋತರೆ ಮಠದ ಗೌರವಕ್ಕೆ ಧಕ್ಕೆಯಾಗಲಿದೆ' ಎಂದು ಹೇಳಿದರು.

'ದಿಂಗಾಲೇಶ್ವರ ಸ್ವಾಮೀಜಿ ದೊಡ್ಡ ಧರ್ಮಗುರುಗಳು. ವೈಯಕ್ತಿಕ ಸಮಸ್ಯೆಗಳು ಹಾಗೂ ಅವರ ಸಮಾಜಕ್ಕೆ ಅನ್ಯಾಯವಾಗಿದ್ದರೆ ಅದನ್ನು ಹಿರಿಯರ ಜೊತೆ ಕೂತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು' ಎಂದು ಹೇಳಿದರು.

ADVERTISEMENT

'ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ' ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಣಧರನಂದಿ, 'ಭಾರತ ಸದೃಢವಾಗಬೇಕು. ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.