ಮೈಸೂರು: ಕೇಂದ್ರ ಬಜೆಟ್ ಮಂಡನೆಯ ಮಾರನೇ ದಿನ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಹಾಗೂ ಸಹಕಾರ ಅಧ್ಯಯನ ವಿಭಾಗವು ಮಾನಸ ಗಂಗೋತ್ರಿಯಲ್ಲಿ ಸಂವಾದ ಆಯೋಜಿಸಿತ್ತು. ಆರ್ಥಿಕ ತಜ್ಞರು, ವಿಶ್ಲೇಷಕರು, ಅರ್ಥಶಾಸ್ತ್ರ ಪ್ರಾಧ್ಯಾಪಕರು ಬಜೆಟ್ ವಿಶ್ಲೇಷಿಸಿದರು. ಅರ್ಥಶಾಸ್ತ್ರ ವಿಭಾಗದವರು ಸೇರಿದಂತೆ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂದರ್ಶಕ ಪ್ರಾಧ್ಯಾಪಕ ಪ್ರೊ. ಎಂ.ವಿ.ಶ್ರೀನಿವಾಸಗೌಡ, ‘ಇಂದು ಎಷ್ಟು ಮಂದಿ ದಿನಪತ್ರಿಕೆ ಓದಿದ್ದೀರಿ. ಅದರಲ್ಲೂ ಬಜೆಟ್ಗೆ ಸಂಬಂಧಿಸಿದ ಸುದ್ದಿಯನ್ನು ಎಷ್ಟು ಮಂದಿ ಓದಿದ್ದೀರಿ ಕೈಎತ್ತಿ’ ಎಂದು ಕೇಳಿದರು.
ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಪರಸ್ಪರ ಮುಖ ನೋಡಿಕೊಂಡರು. ಅವರಲ್ಲಿ ಕೈಎತ್ತಿದ್ದು ಐದು ಮಂದಿ ಮಾತ್ರ! ಪ್ರಶ್ನೆ ಕೇಳಿದ ಶ್ರೀನಿವಾಸಗೌಡ ಮಾತ್ರವಲ್ಲ; ವೇದಿಕೆಯಲ್ಲಿ ಇತರ ಗಣ್ಯರೂ ತಲೆ ಮೇಲೆ ಕೈಇಟ್ಟುಕೊಂಡರು. ‘ಅರ್ಥಶಾಸ್ತ್ರ ವಿದ್ಯಾರ್ಥಿಗಳೇ ಈ ರೀತಿ ಮಾಡಿದರೆ ಹೇಗೆ? ನಿಮಗಾಗಿ ಆಯೋಜಿಸಿರುವ ಸಂವಾದವಿದು. ನೀವೆಲ್ಲ ದೇಶದ ಅರ್ಥ ವ್ಯವಸ್ಥೆಗೆ ಬೇರೆ ಬೇರೆ ರೂಪದಲ್ಲಿ ಕೊಡುಗೆ ನೀಡುವವರು. ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಬಂದಿದ್ದರೆ ಬಜೆಟ್ ಕುರಿತಾದ ವಿಶ್ಲೇಷಣೆ ಸುಲಭವಾಗಿ ಅರ್ಥವಾಗುತ್ತಿತ್ತು.
ಕನಿಷ್ಠ ಇವತ್ತಾದರೂ ನೀವು ಪತ್ರಿಕೆ ಓದಬೇಕಿತ್ತು’ ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು. ಆಗ ವಿದ್ಯಾರ್ಥಿಯೊಬ್ಬ, ‘ಪತ್ರಿಕೆ ಓದಿದ್ದೆ. ನೀವು ಪ್ರಶ್ನೆ ಕೇಳಬಹುದು ಎಂಬ ಭಯದಿಂದ ಕೈಎತ್ತಲಿಲ್ಲ’ ಎಂದು ಮೆಲ್ಲಗೆ ಹೇಳಿದ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.