ಪ್ರಜಾಪ್ರಭುತ್ವದ ಪರಂಪರೆಗೆ ಅನ್ಯವಾದ ಅಸಹನೆಯ ರಾಜಕಾರಣ ತನ್ನ ಕೋರೆದಾಡೆಗಳನ್ನು ಪ್ರದರ್ಶಿಸಲು ಆರಂಭಿಸಿದ್ದಕ್ಕೆ ಸ್ವತಂತ್ರ ಭಾರತದಷ್ಟೇ ಸುದೀರ್ಘವಾದ ಇತಿಹಾಸವಿದೆ. ಕಲಾಕೃತಿಗಳ ನಾಶ, ಪುಸ್ತಕಗಳ ನಿಷೇಧ, ಬಹುತ್ವದ ಸಾಂಸ್ಕೃತಿಕ ಸಂಕೇತಗಳನ್ನು ನಿರ್ದಿಷ್ಟ ಮತ–ಧರ್ಮಗಳಿಗೆ ಸೀಮಿತಗೊಳಿಸುವುದರಲ್ಲಿ ತೊಡಗಿಕೊಂಡಿದ್ದ ಅಸಹನೆಯ ರಾಜಕಾರಣ ಈಗ ಮತ್ತೊಂದು ಮಜಲಿಗೆ ತಲುಪಿದೆ.
ಸಾಹಿತಿಗಳು, ಬರಹಗಾರರು ಮತ್ತು ಕಲಾವಿದರಂಥ ಸಾರ್ವಜನಿಕ ವ್ಯಕ್ತಿತ್ವವಿರುವವರು ತಮ್ಮ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಪ್ರತಿಪಾದಿಸುವುದನ್ನೂ ತಪ್ಪು ಎನ್ನುತ್ತಿದೆ. ಇತ್ತೀಚೆಗೆ ಹಿರಿಯ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡ್, ಚಿಂತಕ ಜಿ.ಕೆ. ಗೋವಿಂದ ರಾವ್, ನಾಟಕಕಾರ ಕೆ.ಮರುಳಸಿದ್ಧಪ್ಪ ಮುಂತಾದವರು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಜಾತ್ಯತೀತತೆಯನ್ನು ಉಳಿಸುವುದಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ನಿಲುವಿನ ಹಿಂದೆ ಅವರ ವೈಯಕ್ತಿಕ ರಾಜಕೀಯ ಆಯ್ಕೆಗಳು ಕೆಲಸ ಮಾಡಿದ್ದವು. ಈ ತನಕದ ಸಾಹಿತ್ಯಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಅವರು ಪ್ರತಿಪಾದಿಸುತ್ತಾ ಬಂದಿದ್ದ ನಿಲುವುಗಳನ್ನೇ ಇಲ್ಲಿಯೂ ಹೇಳಿದ್ದರು. ಇದನ್ನು ವಿಮರ್ಶಿಸುವ ಮತ್ತು ಪ್ರತಿವಾದ ಮಂಡಿಸುವ ಹಕ್ಕು ರಾಜಕೀಯ ಪಕ್ಷಗಳೂ ಸೇರಿದಂತೆ ಭಾರತದ ಎಲ್ಲಾ ಪೌರರಿಗೂ ಇದೆ. ಆದರೆ ಬಿಜೆಪಿಯ ಹಲವು ಮುಖಂಡರು ಈ ಸಾಹಿತಿಗಳ ನಿಲುವಿಗೆ ಪ್ರತಿಕ್ರಿಯಿಸುತ್ತಿರುವ ಬಗೆ ಕೀಳು ಮಟ್ಟದ್ದಾಗಿದೆ. ಅಭಿಪ್ರಾಯ ಭೇದವನ್ನು ಮುಂದಿಡುವುದಕ್ಕೂ, ಭಿನ್ನಾಭಿಪ್ರಾಯವನ್ನು ದಮನಿಸುವುದಕ್ಕೂ ವ್ಯತ್ಯಾಸವೇ ಇಲ್ಲ ಎಂಬಂತೆ ಈ ಪ್ರತಿಕ್ರಿಯೆಗಳಿವೆ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವವುಳ್ಳ ನಾಯಕರಿಂದಲೂ ಅಸಹನೆಯ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗುವಂತಹ ಮಾತು ಬರುತ್ತಿರುವುದು ದುರದೃಷ್ಟಕರ.
ಸಾಹಿತಿಗಳು ರಾಜಕೀಯ ನಿಲುವನ್ನು ಇಟ್ಟುಕೊಂಡಿರುವುದೇ ತಪ್ಪು. ಇದ್ದರೂ ಅದನ್ನು ಬಹಿರಂಗವಾಗಿ ಹೇಳಬಾರದು ಎಂದೆಲ್ಲಾ ಮಾತನಾಡುತ್ತಿರುವ ಬಿಜೆಪಿ ನಾಯಕರು ಅವರ ಪಕ್ಷವನ್ನು ಬೆಂಬಲಿಸುವ ಸಾಹಿತಿಗಳು, ಬರಹಗಾರರು ಮತ್ತು ಪತ್ರಕರ್ತರಿದ್ದಾರೆ ಎಂಬುದರ ಕುರಿತಂತೆ ಜಾಣ ಮರೆವನ್ನು ನಟಿಸುತ್ತಾರೆ. ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಸಂಶೋಧಕ ಎಂ.ಚಿದಾನಂದಮೂರ್ತಿ ಮುಂತಾದವರು ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯೇ ಸರಿ ಎಂಬಂಥ ಮಾತು ಆಡಿದ್ದಾರೆ.
ಈ ಸಂದರ್ಭದಲ್ಲಿ ಸಾಹಿತಿಗಳು ಹೀಗೆಲ್ಲಾ ಮಾತನಾಡಬಾರದೆಂದು ಬಿಜೆಪಿಗೆ ಅನ್ನಿಸಿದ್ದಿಲ್ಲ. ಅಷ್ಟೇಕೆ ಬಿಜೆಪಿಯನ್ನು ವಿರೋಧಿಸುವ ಯಾವ ಪಕ್ಷವೂ ಈ ಸಾಹಿತಿಗಳನ್ನು ವೈಯಕ್ತಿಕವಾಗಿ ನಿಂದಿಸುವ ಮಟ್ಟಕ್ಕೆ ಇಳಿದ ಉದಾಹರಣೆಗಳೂ ಇಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು ನಿವೃತ್ತರಾದವರೂ ಸಕ್ರಿಯ ರಾಜಕಾರಣಕ್ಕೆ ಬಂದು ತಮ್ಮ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ ಮತ್ತು ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯಿಂದಲೇ ಉದಾಹರಣೆಗಳನ್ನು ತೆಗೆದುಕೊಳ್ಳಬಹುದು.
ಇಷ್ಟಾಗಿಯೂ ತಮ್ಮ ಪಕ್ಷದ ರಾಜಕೀಯ ನಿಲುವುಗಳನ್ನು ಸಾಹಿತಿಗಳು ಪ್ರಶ್ನಿಸಿದಾಕ್ಷಣ ಬಿಜೆಪಿಯ ಕೆಲವು ನಾಯಕರು ಅಪ್ರಬುದ್ಧ ಮತ್ತು ಕೀಳುಮಟ್ಟದ ಟೀಕೆಗಳಲ್ಲಿ ತೊಡಗಿರುವುದು ಚೋದ್ಯದ ಸಂಗತಿ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಡಳಿತ ನಡೆಸಿದ ಅನುಭವವಿರುವ ಬಿಜೆಪಿಯಂಥ ಪಕ್ಷವನ್ನು ಪ್ರತಿನಿಧಿಸುತ್ತಿರುವ ಮುಖಂಡರಿಗೆ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕರಿಸಬೇಕು ಎಂಬುದನ್ನು ಯಾರಾದರೂ ಹೇಳಿಕೊಡುವ ಅಗತ್ಯ ಉದ್ಭವಿಸಬಾರದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.