ಬೆಂಗಳೂರು: ಆಡು ಮಾತಿನಲ್ಲಿ ಬಳಕೆಯಲ್ಲಿರುವ ಎಲ್ಲರ ಕನ್ನಡವನ್ನೂ ಬರವಣಿಗೆಗೆ ತರಬೇಕು; ಭಾಷಿಕ ಬದಲಾವಣೆ ಸಾಮಾನ್ಯರ ಉಚ್ಚಾರಣೆಗೆ ಮತ್ತು ಗ್ರಹಿಕೆಗೆ ನಿಲುಕುವಂತಿರಬೇಕು; ಈಗಾಗಲೇ ರೂಢಿಯಲ್ಲಿರುವ ಪದಗಳನ್ನು ಬದಲಿಸುವ ಅಗತ್ಯವಾದರೂ ಏನು?.
ಹೊನಲು ಬ್ಲಾಗ್ ಬಳಗವು ಶನಿವಾರ ಏರ್ಪಡಿಸಿದ್ದ ಬ್ಲಾಗ್ನ ಮೊದಲ ವಾರ್ಷಿಕೋತ್ಸವ ‘ಹೊನಲು ಮಿಂಬಾಗಿಲಿಗೆ ಮೊದಲನೇ ವರುಷದ ಹುಟ್ಟುಹಬ್ಬ’ದಲ್ಲಿ ಶಿಷ್ಟ ಭಾಷೆಯನ್ನು ಕೈಬಿಡುವ ಬಗ್ಗೆ ನಡೆದ ಚರ್ಚೆಯಲ್ಲಿ ಕೇಳಿಬಂದ ಅಭಿಪ್ರಾಯಗಳಿವು.
ಹೊನಲು ಬಳಗದ ಕಿರಣ್ ಬಾಟ್ನಿ ಅವರು, ‘ಆಡುನುಡಿಯ ಕನ್ನಡದಲ್ಲಿ ಬಳಕೆಯಲ್ಲಿಲ್ಲದ ಅಕ್ಷರಗಳು ಮತ್ತು ಪದಗಳನ್ನು ಕೈಬಿಡಬೇಕು. ಹೊನಲು ಬಳಗವು ಇಂಗ್ಲಿಷ್ ಮತ್ತು ಸಂಸ್ಕೃತ ಮೂಲದ ಪದಗಳನ್ನು ಕನ್ನಡಕ್ಕೆ ಬದಲಿಸುವ ಮತ್ತು ಹೊಸ ಕನ್ನಡ ಪದಗಳನ್ನು ಸೃಷ್ಟಿಸುವ ಭಾಷಿಕ ಪ್ರಯೋಗಕ್ಕೆ ಮುಂದಾಗಿದೆ. ಮಹಾಪ್ರಾಣಗಳನ್ನು ಕೈಬಿಟ್ಟು, ಸಂಸ್ಕೃತ, ಇಂಗ್ಲಿಷ್ ಮೂಲದ ಪದಗಳ ಬದಲಿಗೆ ಕನ್ನಡದಲ್ಲೇ ಹೊಸ ಪದಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದರು.
ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಮಾತನಾಡಿ, ‘ತಾಂತ್ರಿಕ ವಿಚಾರಗಳನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ಹಿಂದೆಯೇ ನಡೆದಿದೆ. 30 ವರ್ಷಗಳ ಹಿಂದೆ ಎನ್ಜಿಇಎಫ್ ಕಾರ್ಖಾನೆಯ ನೌಕರರಿಗೆ ಯಂತ್ರಗಳ ಕೈಪಿಡಿಗಳನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ನಡೆದಿತ್ತು. ಹಲವು ಮಿತಿಗಳಿಂದ ಇಂತಹ ಪ್ರಯತ್ನಗಳು ವಿಫಲವಾಗಿವೆ’ ಎಂದರು.
ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್, ‘ಹೊಸದಾಗಿ ಸೃಷ್ಟಿಸಿದ ಪದಗಳನ್ನು ಉಚ್ಚರಿಸುವಲ್ಲಿ ಮತ್ತು ಅರ್ಥ ಮಾಡಿಕೊಳ್ಳುವಲ್ಲಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟಾಗಬಾರದು’ ಎಂದರು.
‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಮಾತನಾಡಿ, ‘ಹೊಸ ಪದಗಳನ್ನು ಭಾಷಾ ತಜ್ಞರೇ ಸೃಷ್ಟಿಸಬೇಕಿಲ್ಲ. ಆಯಾ ಕ್ಷೇತ್ರದಲ್ಲಿ ಪರಿಣಿತರಾದವರೇ ಹೊಸ ಪದಗಳನ್ನು ಸೃಷ್ಟಿಸಬಹುದು. ಬದಲಾವಣೆಯ ಹೆಸರಿನಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ಕೈಬಿಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಪ್ರಶ್ನಿಸಿದರು.