ಮೈಸೂರು: ಇಲ್ಲಿನ ರಂಗಾಯಣದ ಬೆಳ್ಳಿಹಬ್ಬದ ಅಂಗವಾಗಿ ‘ಬೆಳ್ಳಿ ರಂಗಪಯಣ’ವನ್ನು ಇದೇ 12ರಿಂದ 16ರವರೆಗೆ ಆಯೋಜಿಸಲಾಗಿದೆ.
ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಅಂದು ಮಧ್ಯಾಹ್ನ 12 ಗಂಟೆಗೆ ‘ಬೆಳ್ಳಿ ರಂಗಪಯಣ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜತೆಗೆ, ಬಿ.ವಿ. ಕಾರಂತ ಪ್ರಶಸ್ತಿಯನ್ನು ಬೆಳಕಿನ ತಜ್ಞ ವಿ.ರಾಮಮೂರ್ತಿ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ಳಿ ರಂಗಪಯಣದ ಅಂಗವಾಗಿ ಆ. 12ರಂದು ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿ ಆಧಾರಿತ ನಾಟಕ ಪ್ರದರ್ಶನಗೊಳ್ಳಲಿದೆ.
13ರಂದು ‘ಚೆಕ್ಮೇಟ್’, 14ರಂದು ‘ಚಿರೇಬಂದಿವಾಡೆ’, 15ರಂದು ‘ಪುಗಳೇಂದಿ ಪ್ರಹಸನ’ ಹಾಗೂ 16ರಂದು ‘ಸಂಸ್ಕಾರ’ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ಬಿ.ವಿ.ಕಾರಂತ ಅವರು ಸಂಗ್ರಹಿಸಿದ ವಸ್ತುಗಳ ಸಂಗ್ರಹಾಲಯವನ್ನು ಮೈಸೂರಿಗೆ ಸ್ಥಳಾಂತರಿಸಬೇಕಿದೆ. ಜಾಗಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದರು.