ಗಯಾ (ಪಿಟಿಐ): ಭಾರತ ಭೇಟಿಯಲ್ಲಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಮಂಗಳವಾರ ಬೋಧಗಯಾಕ್ಕೆ ಭೇಟಿ ನೀಡಿ ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಕೆಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಿಹಾರದ ರಾಜಧಾನಿ ಪಟ್ನಾದಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿರುವ, ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಬೋಧಗಯಾ ದೇವಸ್ಥಾನದಲ್ಲಿ ಸಿರಿಸೇನ ಅವರು ಸುಮಾರು ಒಂದು ಗಂಟೆ ಕಾಲ ಕಳೆದರು.
ಸಿರಿಸೇನ ಅವರು ತಮ್ಮ ಪತ್ನಿ ಜಯಂತಿ ಸಿರಿಸೇನ ಹಾಗೂ ಇತರ 24 ಮಂದಿಯೊಂದಿಗೆ ಮಹಾಬೋಧಿ ವೃಕ್ಷದ ಕೆಳಗೆ ಹದಿನೈದು ನಿಮಿಷ ಧ್ಯಾನ ಮಾಡಿದರು ಎಂದು ದೇವಸ್ಥಾನ ಸಮಿತಿಯ ಸದಸ್ಯ ಅರವಿಂದ್ ಕುಮಾರ್ ಸಿಂಗ್ ತಿಳಿಸಿದರು.