‘ಗಣಪ’ ಖ್ಯಾತಿಯ ಸಂತೋಷ್ ಬಾಲರಾಜ್, ರಂಜನಿ ರಾಘವನ್ ಜೋಡಿಯಾಗಿ ನಟಿಸಿರುವ ‘ಸತ್ಯಂ’ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಅಶೋಕ್ ಕಡಬ ನಿರ್ದೇಶನದ ಚಿತ್ರಕ್ಕೆ ಮಹಾಂತೇಶ್ ವಿ.ಕೆ. ಬಂಡವಾಳ ಹೂಡಿದ್ದಾರೆ.
‘ಇತ್ತೀಚೆಗಷ್ಟೇ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಯಾವುದೇ ಕಟ್, ಮ್ಯೂಟ್ ಇಲ್ಲದೆ ಈ ಚಿತ್ರ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ. ಮಾಸ್ ಚಿತ್ರವಾದರೂ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ಎಳೆ ಈ ಚಿತ್ರದಲ್ಲಿದೆ. ಹಾಗಂತ ಕಾಂತಾರದ ನಕಲಲ್ಲ. ಅದಕ್ಕೂ ಮುನ್ನವೇ ಚಿತ್ರೀಕರಣಗೊಂಡಿತ್ತು. ಐಪಿಎಲ್ ನಂತರ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ನಿರ್ದೇಶಕರು.
ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ, ಸಿನಿಟೆಕ್ ಸೂರಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ತೆಲುಗು ನಟ ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್. ಲಕ್ಷ್ಮಿದೇವಿ ಮುಂತಾದವರ ತಾರಾಗಣದಲ್ಲಿದ್ದಾರೆ.