ಬೆಂಗಳೂರು: ವೈಟ್ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದಲ್ಲಿರುವ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡವೊಂದರ 5ನೇ ಮಹಡಿಯಿಂದ ಜಿಗಿದು ಅರುಣ್ಕುಮಾರ್ ಪಾಟೀಲ (28) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕಲಬುರಗಿಯ ಅರುಣ್ಕುಮಾರ್, ಎಂಜಿನಿಯರಿಂಗ್ ಪದವೀಧರ. ಕಂಪನಿಗಳಲ್ಲಿ ಕೆಲಸ ಹುಡುಕಿಕೊಂಡು ಮೇ 8ರಂದು ಬೆಂಗಳೂರಿಗೆ ಬಂದಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದರು’ ಎಂದು ವೈಟ್ಫೀಲ್ಡ್ ಠಾಣೆ ಪೊಲೀಸರು ಹೇಳಿದರು.
‘ಗುರುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಐದನೇ ಮಹಡಿಗೆ ಹೋಗಿದ್ದ ಅರುಣ್ಕುಮಾರ್, ಅಲ್ಲಿಂದಲೇ ಜಿಗಿದಿದ್ದರು. ಜೋರು ಶಬ್ದ ಕೇಳಿದ್ದ ಸ್ಥಳೀಯರು, ಕಟ್ಟಡ ಬಳಿ ಸೇರಿದ್ದರು. ತೀವ್ರ ಗಾಯವಾಗಿ ಅರುಣ್ಕುಮಾರ್ ಸ್ಥಳದಲ್ಲೇ ಅಸುನೀಗಿದ್ದರು’ ಎಂದು ತಿಳಿಸಿದರು.
‘ಅರುಣ್ಕುಮಾರ್ ಅವರ ಮೊಬೈಲ್, ಬ್ಯಾಗ್ ಹಾಗೂ ಇತರೆ ಎಲ್ಲ ವಸ್ತುಗಳು ಕೊಠಡಿಯಲ್ಲಿದ್ದವು. ಆತ್ಮಹತ್ಯೆ ಸಂಬಂಧ ಪೇಯಿಂಗ್ ಗೆಸ್ಟ್ ಕಟ್ಟಡ ಮಾಲೀಕರು ಹಾಗೂ ಇತರರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.