ಬಾಗಲಕೋಟೆ: ‘ಎಸ್ಎಸ್ಎಲ್ಸಿ ಪರೀಕ್ಷೆಯು ಜೀವನದ ಪ್ರಮುಖ ಪರೀಕ್ಷೆಯಾಗಿದ್ದರೂ ನಾನು ಒತ್ತಡ ಮಾಡಿಕೊಳ್ಳಲಿಲ್ಲ. ಎಷ್ಟೇ ಸವಾಲುಗಳಿದ್ದರೂ ಎಲ್ಲವನ್ನೂ ಸಮಾಧಾನವಾಗಿ ನಿಭಾಯಿಸುತ್ತ ಓದಿಕೊಂಡೆ. ಹೀಗಾಗಿಯೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಎಸ್ಎಸ್ಎಲ್ಸಿ ಪರೀಕ್ಷೆಯ ಸಾಧಕಿ ಅಂಕಿತಾ ಬಸಪ್ಪ ಕೊಣ್ಣೂರ ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವಜ್ಜರಮಟ್ಟಿ ಗ್ರಾಮದವರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದು ಮತ್ತು ಯಶಸ್ಸು ಗಳಿಸಿದ್ದು ಹೇಗೆ ಎಂಬುದರ ಬಗ್ಗೆ ಪ್ರಜಾವಾಣಿ ಜೊತೆ ಮಾತನಾಡಿದ ಅವರು, ‘ಶಾಲೆಯಲ್ಲಿನ ಸೌಲಭ್ಯ ಗಳನ್ನು ಸದ್ಬಳಕೆ ಮಾಡಿಕೊಂಡೆ. ಶಿಕ್ಷಕರು, ತಂದೆ–ತಾಯಿಯ ಮಾರ್ಗದರ್ಶನದಿಂದ ಪ್ರೇರಣೆ ಸಿಕ್ಕಿತು’ ಎಂದರು.