ಸಾವಿನ ಮನೆಯ ಮಾತುಗಳಲ್ಲಿಯಂತೂ ನಮ್ಮೊಳಗನ್ನ ನಾವೇ ಇಣುಕಿ ನೋಡಿದಂತೆ. ಸ್ಮಶಾನ ವೈರಾಗ್ಯ ತಾಳಿದಾಗಲೂ ಬದುಕಿನ ಲೆಕ್ಕಾಚಾರದತ್ತ ಹೊರಳುವ ಚಿತ್ತ, ಸಾವಿನ ಭೀತಿಯನ್ನು ಮೂಡಿಸುತ್ತಲೇ ಬದುಕಿನತ್ತ ವಾಲುವ ಸಹಜ ಜೀವನಕ್ರಮ, ಇವೆಲ್ಲ ನಮ್ಮನೆ, ನಿಮ್ಮನೆಯಲ್ಲಿ ಆದ ಮಾತುಗಳಂತೆಯೇ ಮನಸಿನೊಳಗೆ ಚಡಪಡಿಕೆ ಹುಟ್ಟಿಸುತ್ತವೆ. ಆ ತಳಮಳಕ್ಕೆ ಸಣ್ಣದೊಂದು ವಿರಾಮವೇ ಔಷಧಿಯಾಗಬಲ್ಲದು. ಆದರೆ... ಆ ವಿರಾಮವೂ ಓದುಗರು ಅದೇ ಕತೆಯಲ್ಲಿ ಉಳಿಯುವಂತೆ, ಆ ಪಾತ್ರಗಳು ಎಲ್ಲಿಯೂ ಅಳಿಯದಂತೆ ಮಾಡಿಡುತ್ತವೆ. ಕತೆಗಳಿಗೆ ಚಿತ್ರಕಶಕ್ತಿಯಷ್ಟೇ ಸಬಲವಾಗಿಲ್ಲ, ಅದರೊಳಗಿನ ಆಲೋಚನಾ ಕ್ರಮ ಓದುಗನೊಳಗೂ ಗುಂಗಿಹುಳ ಬಿಡುತ್ತದೆ.