ಕೇವಲ ಹಾಡುಗಳನ್ನು ದಾಖಲಿಸದೆ, ಬಿಡಿ ಬಿಡಿಯಾಗಿ ಶಬ್ದ, ಪದ, ವಾಕ್ಯಗಳನ್ನು ವಿವರಿಸುವ ಪ್ರಯತ್ನವನ್ನೂ ಈ ಕೃತಿಯಲ್ಲಿ ಕಾಣಬಹುದು. ಸಂಪೂರ್ಣ ಗೀತೆಯನ್ನು ದಾಖಲಿಸಿದ ನಂತರ ಹಾಡಿನ ರಚನೆ ಮಾಡಿದವರು, ಗಾಯಕರು, ನಟರು ಯಾರು ಎಂಬ ಪುಟ್ಟ ವಿವರದೊಂದಿಗೆ ಆರಂಭವಾಗಿ ಪ್ರತೀ ಸಾಲಿನ ವ್ಯಾಖ್ಯಾನದೊಂದಿಗೆ ಒಂದೊಂದು ಅಧ್ಯಾಯ ಮುಂದುವರಿಯುತ್ತದೆ. ವಿಶೇಷ ಏನೆಂದರೆ ಇಲ್ಲಿರುವ ಎಲ್ಲ ಗೀತೆಗಳ ನಾಯಕ ನಟ ರಾಜ್ಕುಮಾರ್. ಈ ಆಯ್ಕೆ ಉದ್ದೇಶಪೂರ್ವಕವೂ ಹೌದು ಎಂದಿದ್ದಾರೆ ಲೇಖಕರು. ‘ರಾಜ್ಕುಮಾರ್ ಅವರನ್ನು ಮರೆತು ಮಾತನಾಡಿದರೆ ಅಲ್ಲಿ ಸಮಗ್ರತೆಯ ನೋಟ ಸಾಧ್ಯವೇ ಇಲ್ಲ ಎನ್ನುವುದು ಒಂದು ವಿನಮ್ರ ತಿಳಿವಳಿಕೆ’ ಎನ್ನುವ ಸ್ಪಷ್ಟನೆಯನ್ನು ಲೇಖಕರು ನೀಡಿದ್ದಾರೆ. ಆಯ್ಕೆ ಮಾಡಿಕೊಂಡ ಅವಧಿಯಲ್ಲಿನ ಎಲ್ಲ ಖ್ಯಾತ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಓದುಗನಿಗೆ ಅನಿಸಿದರೂ, ಲೇಖಕರ ವಿವೇಚನೆಗೆ ಅದು ಮೀಸಲು. ಒಂದಿಷ್ಟು ಅಮರ ಚಿತ್ರಗೀತೆಗಳನ್ನು ಮೆಲುಕು ಹಾಕಿಕೊಳ್ಳುವ ಅವಕಾಶವನ್ನು ಕೃತಿ ಒದಗಿಸಿದೆ.