ದೇವೇಗೌಡರು ಹೇಳಿರುವಂತೆ ವಿಜಯ್ ಮಲ್ಯ ಸ್ಥಳೀಯರಾಗಿರಬಹುದು. ಅಂದ ಮಾತ್ರಕ್ಕೆ ಬ್ಯಾಂಕುಗಳಿಗೆ ಪಂಗನಾಮ ಹಾಕಬೇಕೆಂದೇನೂ ಇಲ್ಲವಲ್ಲ? ಬ್ಯಾಂಕುಗಳಲ್ಲಿ ಹಣ ಠೇವಣಿ ಇಟ್ಟ ಸಾಕಷ್ಟು ಮಂದಿಯೂ ಮಣ್ಣಿನ ಮಕ್ಕಳೇ ಆಗಿರುತ್ತಾರೆ. ಅವರು ಯಾರೂ ಕಲ್ಲಿನ ಮಕ್ಕಳಲ್ಲ.
ಮಲ್ಯ ಇಲ್ಲಿನ ಮಣ್ಣಿನ ಮಗನಾದರೂ ಅವರೆಂದೂ ಕನ್ನಡ ಮಾತನಾಡಿದ್ದನ್ನು ಹೆಚ್ಚಿನವರು ಕಂಡಿಲ್ಲ. ಹಿಂದೆ ಜನತಾ ಪಕ್ಷದಿಂದ ಕರ್ನಾಟಕದಲ್ಲಿ ಮೂರ್ನಾಲ್ಕು ಕಡೆ ತಮ್ಮ ಅಭ್ಯರ್ಥಿಗಳನ್ನು ಅವರು ನಿಲ್ಲಿಸಿದ್ದರೂ, ಕನ್ನಡ ಮಾತನಾಡುವ ಗೋಜಿಗೆ ಹೋಗಿರಲಿಲ್ಲ ಅಥವಾ ಅವರಿಗೆ ಕನ್ನಡವೇ ಬರುವುದಿಲ್ಲವೋ ಗೊತ್ತಿಲ್ಲ.
ಉದ್ಯಮಿಗಳು ಬ್ಯಾಂಕುಗಳಿಗೆ ಹೀಗೆ ಪಂಗನಾಮ ಹಾಕುತ್ತಾ ಹೋದರೆ ಅದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ರಾಜ್ಯಸಭಾ ಸದಸ್ಯರಾದ ಮಲ್ಯ ದೇಶಕ್ಕೆ ವಾಪಸ್ ಬಂದು ಇಲ್ಲಿನ ಕಾನೂನಿಗೆ ಗೌರವ ಕೊಡುವುದು ಒಳಿತು. ಅವರ ಆಸ್ತಿಯೇ ತಮ್ಮ ಸಾಲಕ್ಕಿಂತ ದೊಡ್ಡದಿರುವಾಗ ಅವರು ಹೆದರಬೇಕಾದ ಅವಶ್ಯಕತೆ ಏನಿದೆ?
- ಚಂದ್ರಕಾಂತ ನಾಮಧಾರಿ, ಅಂಕೋಲಾ