ನವದೆಹಲಿ: ದೇಶ ಅಥವಾ ವಿದೇಶದ ಮಕ್ಕಳನ್ನು ದತ್ತು ಪಡೆಯುವಾಗ ಇರುವ ಅಡೆತಡೆಗಳ ನಿವಾರಣೆಗೆ ಸೂಕ್ತವಾದ ನಿಯಮ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಮೂರು ತಿಂಗಳೊಳಗೆ ರೂಪಿಸುವಂತೆ ಸುಪ್ರೀಂಕೊರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಸರ್ಕಾರ 2015ರಲ್ಲಿ ಹೊಸ ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯನ್ನು ರಚಿಸಿದೆ. ಈ ಕಾಯ್ದೆಯು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೂ ಅನ್ವಯವಾಗುವುದರಿಂದ ನಿಯಮಗಳನ್ನು ಆದಷ್ಟು ಬೇಗ ರೂಪಿಸಬೇಕು ಎಂದು ಮುಖ್ಯ ನ್ಯಾಯ ಮೂರ್ತಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಹೇಳಿದೆ.
ಅದ್ವೈತಾ ಪ್ರತಿಷ್ಠಾನವು 2012ರಲ್ಲಿ ಅರ್ಜಿ ಸಲ್ಲಿಸಿ, ಮಕ್ಕಳ ದತ್ತು ಸ್ವೀಕಾರಕ್ಕೆ ಸೂಕ್ತ ನಿಯಮ ರೂಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿತ್ತು.
ಈಗ ನ್ಯಾಯಪೀಠವು ನಿರ್ದೇಶನ ನೀಡುವ ಮೂಲಕ ಅರ್ಜಿಯನ್ನು ವಿಲೇವಾರಿ ಮಾಡಿದೆ. ಮಕ್ಕಳ ದತ್ತು ಸ್ವೀಕಾರದಲ್ಲೂ ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಷ್ಠಾನ ಕೋರಿತ್ತು.
ನಿರ್ದಿಷ್ಟ ಪ್ರಕರಣಗಳು ಇದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತೆ ನ್ಯಾಯಪೀಠ ಸಲಹೆ ಮಾಡಿದೆ.