ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಹಗುರಾಗಿಸುವ ಬಗೆ

Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

"ಇನ್ನೇನು ಮತ್ತೇನು ಗತಿಯೆಂದು ಬೆದರದಿರು
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ ?"

ಜೀವನಸಾರವನ್ನು ಸರಳ ರೀತಿಯಲ್ಲಿ ಪ್ರತಿಪಾದಿಸುವ ಡಿ. ವಿ. ಜಿ. ಯವರ' ಮಂಕುತಿಮ್ಮನ ಕಗ್ಗ'ದ ಈ ಸಾಲುಗಳು ಕಷ್ಟನಷ್ಟಗಳಿಂದ ಹಿಮ್ಮೆಟ್ಟಿ ಮನವನ್ನು ಸಂತೈಸಿ ಧೈರ್ಯ ನೀಡಬಲ್ಲದು. ಸುಖಕ್ಕೆ ಹಿಗ್ಗಿ ಕಷ್ಟಕ್ಕೆ ಕುಗ್ಗುವುದು ಮನುಷ್ಯನ ಸಹಜ ಗುಣ. ಹಾಗೆಯೇ ಕಷ್ಟಗಳು ಬಂದಾಗ ಮುಂದೇನು ಎಂಬ ಶೂನ್ಯಭಾವ ಕಾಡುವುದೂ ನಿಜ. ನಮ್ಮದೇ ಆದ ಪುಟ್ಟದೊಂದು ಗೂಡು ಕಟ್ಟಿ ಪ್ರೀತಿ ವಾತ್ಸಲ್ಯಗಳೆಂಬ ನೀರೆರೆದು ಪೋಷಿಸಿ ಹಕ್ಕಿಗಳು ಹಾರಿಹೋದಾಗಲೋ ಅಥವಾ ಅಂದುಕೊಂಡದ್ದೆಲ್ಲವೂ ಆಗದೇ ಹೋದಾಗ ನಿರಾಶೆಯಿಂದ ವೇದನೆ ಅನುಭವಿಸುವುದು ಸರ್ವೇ ಸಾಮಾನ್ಯ. ಎಲ್ಲರೂ ಅನುಭವಿಸಲೇಬೇಕಾದ ಜೀವನ ಸಂಧ್ಯೆಯ ಹಂತವಿದು. ಮನವೆಂಬ ಮರ್ಕಟ ಸೂಕ್ಷ್ಮವಾಗಿ ಖೇದಕ್ಕೊಳಗಾಗಿ ಶೂನ್ಯಭಾವದಿಂದ ನರಳುವುದು ಈಗಲೇ.

ಆದರೆ  ನಾವೆಂದುಕೊಂಡಂತೆ ಜೀವನ ಬರೀ ಹೂ ಹಾಸಿಗೆಯಲ್ಲ. ಇಲ್ಲಿ ಏಳುಬೀಳುಗಳು ಇದ್ದದ್ದೇ. ಇದೊಂದು ಅರಿಯದ ಪಯಣವಾದ್ದರಿಂದ ಮುಂದಿನ ಆಗುಹೋಗುಗಳನ್ನು ಉಹಿಸಲೂ ಸಾಧ್ಯವಿಲ್ಲ. ಆದಾಗ್ಯೂ ಕೆಲವರು ಮುಂದಿನ ಜೀವನದ ಬಗ್ಗೆ ನಿಖರತೆಯಿಂದಿರುತ್ತಾರೆ. ಮುಂದೆ ತನ್ನ ಜೀವನ ಹೀಗೇ ಇರಬೇಕು, ತಾನೇನಾಗಬೇಕು ಎಂಬುದರ ಕಲ್ಪನೆಯ ಕೂಸಾಗಿ ಬೆಳೆದು ಆ ನಿಟ್ಟಿನಲ್ಲೇ ಶ್ರಮಿಸುತ್ತಾರೆ. ಜೀವನದಲ್ಲೊಂದು ಗುರಿಯಿಟ್ಟುಕೊಂಡು ಯೋಜನೆಯ ಪ್ರಕಾರ ಪ್ರಯತ್ನಿಸುವುದು ಸಮಂಜಸವಾದರೂ ಅಂದುಕೊಂಡದ್ದೆಲ್ಲವನ್ನೂ ಹೊಂದಲು ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಹೆಚ್ಚಿನವರು ಹೊಂದಾಣಿಕೆ ಸೂತ್ರಕ್ಕೆ ಬದ್ಧರಾಗಿ ಬಂದದ್ದನ್ನು ಒಪ್ಪಿಕೊಂಡು ಸಾಗುತ್ತಾರೆ. ತಮ್ಮ ಯೋಗ್ಯತೆಗೆ ತಕ್ಕಂತೆ ಅಥವಾ ಯೋಗ್ಯತೆಗೂ ಮೀರಿದ್ದನ್ನು ಪಡೆಯಲು ಕೆಲವರಷ್ಟೇ ಸಮರ್ಥರಾದಲ್ಲಿ ಇನ್ನು ಕೆಲವರು ಯೋಗ್ಯತೆಯಿದ್ದರೂ ತಕ್ಕ ಪ್ರತಿಫಲ ಹೊಂದಲು ಅಸಮರ್ಥರಾಗುತ್ತಾರೆ. ಹೀಗೇಕೆ ಎಂಬ ಜಿಜ್ಞಾಸೆ ಕಾಡಿದಲ್ಲಿ ತರ್ಕಿಸುವುದು ಕಷ್ಟ. ಆಗ ನಾನು ಪಡೆದುಕೊಂಡು ಬಂದದ್ದೇ ಇಷ್ಟು ಎಂದೋ; ಇದು ವಿಧಿಲಿಖಿತ ಅಥವಾ ಇದೇ ನನ್ನ ಹಣೆಬರಹವೆನ್ನುವ ವೇದಾಂತ ಸಹಾಯಕ್ಕೆ ಬರುತ್ತದೆ. ಮೇಲಾಗಿ ಈ ರೀತಿ ಸಮಜಾಯಿಸಿಕೊಂಡಲ್ಲಿ  ಮನಕ್ಕಾಗುವ ಕ್ಲೇಶದ ತೀವ್ರತೆಯಿಂದ ಪಾರಾಗಬಹುದು ಅಷ್ಟೇ .

ಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್‌ನ" ಜೀವನವೇ ಒಂದು ನಾಟಕರಂಗ; ಅದರಲ್ಲಿ ನಟಿಸುವ ಪಾತ್ರಧಾರಿಗಳು ನಾವಷ್ಟೇ" ಈ ಸಾಲುಗಳಲ್ಲಿಯೂ ಅಡಗಿದೆ ಜೀವನಸಾರ. ನಮ್ಮ ಪಾಲಿಗೆ ವಿಧಾತ ಏನನ್ನು ವಿಧಿಸಿ ಕಳಿಸಿರುತ್ತಾನೋ ಅದನ್ನು ನಟಿಸಿ ಅನುಭವಿಸಲೇಬೇಕು. ಇದರಿಂದ ವಿಮುಖರಾಗಲು ಆಗದು. ಹುಟ್ಟಿದಾರಭ್ಯ ಪ್ರಾರಂಭವಾಗುವ ನಟನೆಯ ಈ ಪಯಣದಲ್ಲಿ ಕೆಲವೊಮ್ಮೆ ನಮ್ಮ ಮನೋಸ್ಥೈರ್ಯಕ್ಕೆ ಸವಾಲಾಗುವಂತಹ ಘಟನೆಗಳೂ ಎದುರಾಗುತ್ತವೆ. ಅವುಗಳನ್ನು ಬೇಡವೆಂದು ಅನುಭವಿಸದಿರಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಿ ಮುನ್ನಡೆಯುತ್ತೇವೆ ಕೂಡ.

ಆನಂತರದಲ್ಲಿ ಇಷ್ಟಾದರೂ ಸಾಧಿಸಿದ್ದೇನೆ, ತಕ್ಕಮಟ್ಟಿಗೆ ಸುಖವಾಗಿದ್ದೇನೆ ಎಂದು ಹೆಮ್ಮೆ ಪಟ್ಟುಕೊಂಡರೂ ಅದು ಕ್ಷಣಿಕವೆನ್ನಿಸಿ ಎಂದೋ ಘಟಿಸಿಹೋದ ಹಳೆಯ ಕಹಿನೆನಪುಗಳಲ್ಲೇ ಮುಳುಗಿ ವೇದನೆ ಪಡುವುದು ಹೆಚ್ಚಿನವರ ಜಾಯಮಾನ. ಹಾಗಾದಾಗ ಸಾಧನೆಗಳೆಲ್ಲಾ ಗೌಣವಾಗಿ ಬೇಡದ ನೆನಪುಗಳ ಸುಳಿಯಲ್ಲಿ ಸಿಲುಕಿ ಸದಾ ಕೊರಗುತ್ತ ತಾವಷ್ಟೇ ಅಲ್ಲದೇ ಸುತ್ತಲಿನ ಪ್ರೀತಿಪಾತ್ರರು - ಒಡನಾಡಿಗಳನ್ನೆಲ್ಲಾ ಖಿನ್ನರಾಗಿಸಿಬಿಡುತ್ತಾರೆ. ಅಹಿತಕರ , ಹಳೆಯ ಘಟನೆಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತ ಸ್ವಮರುಕಪಡುತ್ತ ಕೊರಗುತ್ತಿರುವುದೇ ಇವರ ಹುಟ್ಟುಗುಣ. ಸದಾ ಕೊರಗುವುದನ್ನೇ ಚಟವಾಗಿಸಿಕೊಂಡಲ್ಲಿ ಕೇಳುವವರೂ ಸಹ ಒಂದೆರಡು ಸಲ ಕೇಳಿಯಾರು; ಮರುಕ ತೋರಿ ಸಂತೈಸಿಯಾರು.

ಆದರಿದು ನಿತ್ಯದ ಚಿತ್ರಣವಾದಾಗ " ಅಯ್ಯಪ್ಪ ! ಕೊರಗಪ್ಪ ಬರುತ್ತಿದ್ದಾನೆ ಅವನ ಕೈಯಲ್ಲಿ ಸಿಕ್ಕರೆ ಮುಗಿಯಿತು ಕಥೆ" ಭೂತ ದರ್ಶನವಾದಂತೆ ದೂರ ಸರಿಯುವವರೇ ಹೆಚ್ಚು. ಆದರೆ ಕೊರಗಬೇಡಿ ಎಂದು ಹೇಳುವುದು ಸುಲಭ. ಕಹಿ ಘಟನೆಗಳನ್ನು ಅನುಭವಿಸಿದವರಿಗಷ್ಟೇ ಗೊತ್ತು ಅದರ ತೀವ್ರತೆ - ಹೌದಾದರೂ ಅಂತಹ ಅಪ್ರಿಯ ಘಟನೆಗಳನ್ನು ಪ್ರಯತ್ನಪೂರ್ವಕವಾಗಿ  ಮರೆಯುವುದರಲ್ಲಿದೆ ನಿಜವಾದ ಜಾಣತನ. ಕಹಿಘಟನೆಗಳು ಅದರಲ್ಲೂ ಸ್ವಜನರಿಂದಲೇ ನಿಂದನೆ, ದ್ರೋಹ, ಅಗೌರವಗಳಿಗೆ ತುತ್ತಾಗಿ ಘಾಸಿಗೊಂಡಿದ್ದಲ್ಲಿ ಮರೆಯುವುದು ಅತೀ ಕಷ್ಟವಾದರೂ ಅಸಾಧ್ಯವೇನಲ್ಲ. ಅವುಗಳನ್ನು ಸ್ಮೃತಿಪಟಲದಿಂದ ಬೇರುಸಹಿತ ಕಿತ್ತೊಗೆಯಲು ಶ್ರಮಿಸಬೇಕಷ್ಟೇ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು.

"ಮನಸ್ಸಿದ್ದಲ್ಲಿ ಮಾರ್ಗ"
ಹೌದಲ್ಲವೇ? ಹಳೆಯ ಸಂಗತಿಗಳನ್ನೇ ಪದೇ ಪದೇ ಹೇಳಿಕೊಂಡು ಕೊರಗುತ್ತಿದ್ದಲ್ಲಿ ಅವು ನೆನಪಿನಾಳದಲ್ಲಿ ಬೇರೂರಿ ಖಿನ್ನತೆ, ನೋವು, ದುಃಖ ಹೆಚ್ಚಿ ಅಸಹಾಯಕತೆಯ ಸ್ಥಿತಿಯಲ್ಲಿ ನರಳುತ್ತಾ ಮನೋಕ್ಲೇಶ ಉಂಟಾಗಿ ಮನಸ್ಸು - ಶರೀರದ ಸ್ವಾಸ್ಥ್ಯ ಕೆಡುತ್ತದೆಯೇ ಹೊರತು ಕೊರಗಿಗೆ ಕಾರಣವಾದ ಘಟನೆಗಳು ಬದಲಾಗಲಾರವು. ಮತ್ತೆ ಮತ್ತೆ ಹೇಳಿಕೊಳ್ಳುತ್ತಾ ಅನುಭವಿಸುವುದು ಖಂಡಿತವಾಗಿಯೂ ಬೇಡ. ಕಷ್ಟ, ವೇದನೆಗಳನ್ನು ಆಪ್ತರಲ್ಲಿ ಹೇಳಿಕೊಂಡಲ್ಲಿ ಅವುಗಳ ತೀವ್ರತೆಯೇನೋ ತಗ್ಗುತ್ತದೆ ಆದರೆ ಅದನ್ನೇ ಚಟವಾಗಿಸಿಕೊಂಡಲ್ಲಿ ಬೇಡದ ನೆನಪುಗಳ ಹಿಡಿತದಿಂದ ಹೊರಬರಲಾಗದೇ ಖಿನ್ನತೆಗೆ ಜಾರುವುದು ಖಂಡಿತ. ಆದ್ದರಿಂದ ಸದಾ ಕೊರಗುತ್ತಾ ಹೊಸ ಸಮಸ್ಯೆಗಳ ಹುಟ್ಟಿಗೆ ಕಾರಣರಾಗುವುದು ಬೇಡ.   

'ಮರೆವು' ನಮಗೆ ದೇವರಿತ್ತ ವರ. ಕಹಿನೆನಪುಗಳನ್ನು ಅಳಿಸಿ ಹಾಕಲು ಆಗದಿದ್ದರೂ ಮರೆಯಲೆತ್ನಿಸಬಹುದು. ನಮಗಿಂತಲೂ ಹೀನ ಸ್ಥಿತಿಯಲ್ಲಿರುವವರೊಡನೆ ತುಲನೆ ಮಾಡಿಕೊಂಡು ಸಮಾಧಾನಿಸಿಕೊಳ್ಳಬೇಕು. ಒಳ್ಳೆಯ ವಿಚಾರವಂತರಾಗಿ ಸಂತಸದಿಂದಿದ್ದು ಮನಸ್ಸಿಗೆ ಮುದ ನೀಡುವ ಹವ್ಯಾಸದಲ್ಲಿ ತೊಡಗಿಕೊಂಡು ಚಟುವಟಿಕೆಯಿಂದಿರುವತ್ತ ಗಮನ ಕೊಡಬೇಕು. 'ಈಗ ನಾನೇನಾಗಿದ್ದೇನೆ ಅದು ನನ್ನ ಸಾಧನೆ' ಈ ಭಾವ ಬೆಳೆಸಿಕೊಂಡು ಆತ್ಮವಿಶ್ವಾಸ - ಆತ್ಮಗೌರವದಿಂದ ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವೆನೆಂಬ ಛಾತಿ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಜೀವಿಯೂ ತನ್ನದೇ ಆದ ವೈಶಿಷ್ಟ್ಯಗಳಿಂದ ಉತ್ತಮನೇ.

ಆ ವಿಶಿಷ್ಟ ಗುಣವನ್ನು ಗುರುತಿಸಿ ಅದನ್ನು ಶಕ್ತಿಯುತವಾಗಿಸಲು ನಿಷ್ಠೆಯಿಂದ ಯತ್ನಿಸಿದಲ್ಲಿ ಖಂಡಿತವಾಗಿಯೂ ಜಯಶಾಲಿಗಳಾಗಬಹುದು. ಆಧ್ಯಾತ್ಮದಲ್ಲಿ ತೊಡಗಿಕೊಂಡು ದೇವರ ನಾಮ ಸ್ಮರಣೆ, ಭಜನೆಗಳಲ್ಲಿ ತೊಡಗಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ಸಿಕ್ಕೇ ಸಿಗುತ್ತದೆ. ದೈನಂದಿನ ಏಕತಾನತೆಯಿಂದ ಹೊರಬರಲು ಆಗಾಗ ಶಕ್ತ್ಯಾನುಸಾರ ಪ್ರವಾಸ ಕೈಗೊಳ್ಳುವುದು, ಗಿಡಮರಗಳು, ಪುಟ್ಟ ಪುಟ್ಟ ಹೂ ಗಿಡಗಳನ್ನು ಬೆಳೆಸಿ ಪ್ರಕೃತಿಗೆ ಹತ್ತಿರವಾಗುವುದು ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದು. ಸುಮಧುರ ಸಂಗೀತ ಆಲಿಸುವಿಕೆ; ಲಲಿತ ಕಲೆ ಮುಂತಾದ ಹವ್ಯಾಸಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ಜೀವನೋತ್ಸಾಹ ಚಿಗುರುವುದು ದಿಟ. ಹೊಸ ಹೊಸ ವಿಷಯಗಳನ್ನು ಕಲಿಯಲು ಎಂದಿಗೂ ಹಿಂಜರಿಕೆ ಬೇಡ. ಕಲಿಕೆಗೆ ವಯಸ್ಸಿನ ನಿರ್ಭಂಧವಿಲ್ಲ.

ಜೀವನವೇ ಒಂದು ಕಲಿಕಾ ಶಿಬಿರ. ಹಂತಹಂತದಲ್ಲೂ ಕಲಿಯುವುದು ಇದ್ದೇ ಇರುತ್ತದೆ. ನಾವೆಂದುಕೊಂಡಂತೆ ಎಲ್ಲವೂ ನಡೆಯದು; ಬಂದದ್ದನ್ನು ಬಂದಂತೆ ಸ್ವೀಕರಿಸುವ ದೃಷ್ಟಿಕೋನವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗಾವ ಖೇದವೂ ಇರದು. ಅವಮಾನ, ತಿರಸ್ಕಾರ, ವೈಫಲ್ಯಗಳಿಗೆ ಕುಗ್ಗದೇ ಕೊರಗು, ಋಣಾತ್ಮಕ ವಿಚಾರ ಬಿಟ್ಟು ಬರಲಿರುವ ಸುಂದರವಾದ ನಾಳೆಗಳ ಕಲ್ಪನೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಸುಖ, ಶಾಂತಿ, ನೆಮ್ಮದಿಗಳು ನಮ್ಮ ಅಡಿಯಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಶಸ್ಸೂ ದಕ್ಕುತ್ತದೆ. ಧನಾತ್ಮಕತೆಯಿಂದ ಜೀವನ ಎದುರಿಸುವ,ಅನುಭವಿಸುವ ಕಲೆ ಬೆಳೆಸಿಕೊಂಡಲ್ಲಿ ನಾವು ಸುಖದ ಅನುಭವದಿಂದ ವಂಚಿತರಾಗಲು ಸಾಧ್ಯವೇ ಇಲ್ಲ. ಇರುವಷ್ಟು ದಿನ ನಗುನಗುತ್ತಾ ಪರರನ್ನೂ ನಗಿಸುತ್ತಾ ಜೀವನವನ್ನು ಹಗುರವಾಗಿಸಿಕೊಳ್ಳೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT