ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮೋದಿ ಅಲ್ಲದಿದ್ದರೆ ಇನ್ಯಾರು?

ಜನಸಮೂಹಕ್ಕೆ ಸ್ಪಷ್ಟವಾದ ಆಲೋಚನೆ ಇದೆ, ರಾಜಕಾರಣದ ಮೋಸ ಬಹುಬೇಗ ಅರ್ಥವಾಗುತ್ತದೆ
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ನನ್ನ ಒಂದಿಷ್ಟು ಸ್ನೇಹಿತರು ಮನೆಗೆ ಊಟಕ್ಕೆ ಬಂದಿದ್ದರು. ವಿಭಿನ್ನ ಹಿನ್ನೆಲೆಗಳಿಗೆ ಸೇರಿದ ಅಧಿಕಾರಿಗಳು, ಬರಹಗಾರರು ಮತ್ತು ವೃತ್ತಿಪರರು ಅವರಾಗಿದ್ದರು. ಚುನಾವಣೆಯ ಬಗ್ಗೆ ಮಾತಾಡಬಾರದು ಎಂದು ಎಲ್ಲರೂ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರೂ, ಮಾತುಕತೆಯು ಚುನಾವಣೆಯ ಕಡೆಯೇ ಹೊರಳಿತು. ಹಿಂದೆಲ್ಲ ಬಹಳ ಚೇತೋಹಾರಿ ಚರ್ಚೆಗಳು ನಡೆಯುತ್ತಿದ್ದವು. ಈಗ ರಾಜಕೀಯ ಕುರಿತ ಚರ್ಚೆಗಳು ಸಂಬಂಧಗಳನ್ನು ಹಾಳುಮಾಡುತ್ತಿವೆ.

ಊಟಕ್ಕೆ ಬಂದವರಲ್ಲಿ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳಿದ್ದರು. ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರಿ
ದ್ದರು. ಒಬ್ಬ ವೈದ್ಯ, ಒಬ್ಬ ಇನ್ವೆಸ್ಟ್‌ಮೆಂಟ್ ಬ್ಯಾಂಕರ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರೊಬ್ಬರು ಕೂಡ ಇದ್ದರು. ಇಬ್ಬರು ಬರಹಗಾರರಾಗಿದ್ದರು. ಬ್ಯಾಂಕರ್ ಹಾಗೂ ಅನಿವಾಸಿ ಭಾರತೀಯ ಮೋದಿ ‘ಭಕ್ತ’ರು, ಹಿಂದುತ್ವದ ಹೊಗಳುಭಟರು. ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳ ಪೈಕಿ ಒಬ್ಬರು ಉದಾರವಾದಿ ನಿಲುವು ಹೊಂದಿದವರು; ಇನ್ನೊಬ್ಬರು ಎಲ್ಲ ಪಕ್ಷಗಳೂ ಒಂದೇ, ಕೆಲವರನ್ನು ಹೊರತುಪಡಿಸಿದರೆ ಎಲ್ಲ ಪಕ್ಷಗಳ ನಾಯಕರೂ ಭ್ರಷ್ಟರು ಎನ್ನುವ ನಿಲುವು ಹೊಂದಿದ್ದ ಮಧ್ಯಮಪಂಥದ ವ್ಯಕ್ತಿ. ಈ ನಾಯಕರು ಅಧಿಕಾರಕ್ಕಾಗಿ ತಮ್ಮ ತತ್ವಗಳು ಹಾಗೂ ಸಿದ್ಧಾಂತಗಳನ್ನು ಬಿಡಲು ಸಿದ್ಧರಿರುತ್ತಾರೆ ಎಂದು ಆ ವ್ಯಕ್ತಿ ಭಾವಿಸಿದ್ದರು.

ಬಹಳ ಖ್ಯಾತಿಯನ್ನು ಗಳಿಸಿರುವ ಐ.ಟಿ. ಕಂಪನಿಗಳಲ್ಲಿ ಕೆಲಸ ಮಾಡಿರುವ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಹೊಗಳುವಾಗ ಬಹಳ ಉತ್ಸಾಹ ಬರುತ್ತಿತ್ತು. ಉತ್ತರ ಪ್ರದೇಶವು ಬದಲಾವಣೆಯ ಕಾಲಘಟ್ಟದಲ್ಲಿ ನಿಂತಿದೆ, ಯೋಗಿ ಆದಿತ್ಯನಾಥ ಅವರ ದೂರದೃಷ್ಟಿಯ ನೀತಿಗಳ ಕಾರಣದಿಂದಾಗಿ ಹೂಡಿಕೆಯ ತಾಣವಾಗಿ ಅದು ಬೆಂಗಳೂರನ್ನು ಹಿಂದಿಕ್ಕಲಿದೆ ಎಂದು ಅವರು ಹೇಳಿದರು. ಇದಕ್ಕೆ ಆಕ್ಷೇಪ ದಾಖಲಿಸಿದ ಬರಹಗಾರರೊಬ್ಬರು, ‘ಪ್ರಮುಖ ಐ.ಟಿ. ಕಂಪನಿಗಳಾದ ಟಿಸಿಎಸ್, ಅಕ್ಸೆಂಚರ್, ಎಚ್‌ಸಿಎಲ್, ಇನ್ಫೊಸಿಸ್, ಐಬಿಎಂ ಅಥವಾ ವಿಪ್ರೊ ಲಖನೌನಲ್ಲಿಯಾಗಲಿ, ಗೋರಖಪುರದಲ್ಲಿ
ಯಾಗಲಿ ಏಕೆ ಹೂಡಿಕೆ ಮಾಡಿಲ್ಲ? ಹಿಂದಿ ಭಾಷಿಕ ರಾಜ್ಯಗಳು ಖಾಪ್ ಪಂಚಾಯಿತಿಗಳು, ಹಿಂದುತ್ವ ಮೂಲಭೂತವಾದಿಗಳ ಮನಃಸ್ಥಿತಿಯಲ್ಲಿ ಸಿಲುಕಿಕೊಂಡಿವೆ. ಅವರಿಗೂ ಇಸ್ಲಾಮಿಕ್ ಮತಾಂಧರಿಗೂ ವ್ಯತ್ಯಾಸವೇ ಇಲ್ಲ’ ಎಂದರು.

ಇದರಿಂದ ವಿಚಲಿತರಾಗದ ಹೂಡಿಕೆದಾರ ಪ್ರತ್ಯುತ್ತರ ನೀಡಿದರು. ಈಗಿನ ಪರಿಸ್ಥಿತಿ ಬದಲಾಗುತ್ತದೆ ಎಂದರು. ತಾವು ಯೋಗಿ ಅವರನ್ನು ಭೇಟಿಯಾಗಿದ್ದುದಾಗಿ, ಉತ್ತರ ಪ್ರದೇಶವನ್ನು ಅಪರಾಧಗಳಿಂದ ಮುಕ್ತವಾಗಿಸಿದ್ದು ಹೇಗೆ ಎಂಬುದಾಗಿ ಅವರ ಆಪ್ತರನ್ನು ಪ್ರಶ್ನಿಸಿದ್ದಾಗಿ ತಿಳಿಸಿದರು. ‘ಅದು ಸರಳ. ಒಂದು ಕೊಲೆಯಾದರೆ, ಕೋರ್ಟ್‌ಗಳು ಬಹಳ ಸಮಯ ತೆಗೆದುಕೊಳ್ಳುತ್ತವೆ. ಸಾಕ್ಷಿಗಳು ತಿರುಗಿ ಬೀಳುತ್ತಾರೆ. ಪೊಲೀಸರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕೊಲೆ ಮಾಡಿದವರಿಗೆ ಜಾಮೀನು ಸಿಗುತ್ತದೆ, ನಂತರ ಅವರು ನಿರ್ದೋಷಿಗಳಾಗುತ್ತಾರೆ. ಇದರ ಪರಿಣಾಮವಾಗಿ ಗೂಂಡಾ ರಾಜ್ಯ ಸೃಷ್ಟಿಯಾಗುತ್ತದೆ. ಹೀಗಾಗಿ, ನಂಬಿಕಸ್ಥ ಡಿಜಿಪಿಗಳಿಗೆ ಒಂದು ಸೂಚನೆ ನೀಡಲಾಗಿದೆ. ಬಂಧಿತ ಕೊಲೆಗಾರರನ್ನು ಕೊಲೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕೊಲೆಗಾರರಿಗೆ ಅದೇ ಬಗೆಯ ನ್ಯಾಯವನ್ನು ತಕ್ಷಣವೇ ಒದಗಿಸಿ ಎಂದು ಹೇಳಲಾಗಿದೆ. ಹೀಗಾಗಿ, ಕೊಲೆ ಮಾಡಲು ಯಾರು ಈಗ ಮುಂದೆ ಬರುತ್ತಾರೆ ಎಂದು ಹೇಳಿ ನೋಡೋಣ’ ಎಂದು ಮುಖ್ಯಮಂತ್ರಿಯವರ ಆಪ್ತರು ಹೇಳಿದ್ದಾಗಿ ತಿಳಿಸಿದರು. 

ತಮ್ಮ ಮಾತಿಗೆ ಸಹಮತ ವ್ಯಕ್ತವಾಗುತ್ತದೆಯೇ ಎಂದು ಈ ಹೂಡಿಕೆದಾರ ಸುತ್ತಲೂ ಗಮನಿಸಿದರು. ಚರ್ಚೆಯ ಹೆಸರಿನಲ್ಲಿ ಎರಡು ಗುಂಪುಗಳು ಆಗುವುದು ಬೇಡ ಎಂದು ನಾನು ಬಹಳ ನಮ್ರ ದನಿಯಲ್ಲಿ, ‘ಇದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಇದು ಪ್ರಭುತ್ವವೇ ಪ್ರತೀಕಾರಕ್ಕೆ ಇಳಿದಂತೆ ಆಗುತ್ತದೆ. ಅದು ಸಾರ್ವಜನಿಕವಾಗಿ ಸಾಯಹೊಡೆಯುವ ಕೃತ್ಯಗಳಿಗಿಂತಲೂ ಕೆಟ್ಟದ್ದಾಗುತ್ತದೆ’ ಎಂದು ಹೇಳಿದೆ. ಹೂಡಿಕೆದಾರರ ಮಾತಿನಿಂದ ಬರಹಗಾರರು ದಿಗ್ಭ್ರಮೆಗೆ ಒಳಗಾದರು. ಭಾರತವು ಪ್ರಜಾತಂತ್ರದ ತಾಯಿ ಎಂದು ನರೇಂದ್ರ ಮೋದಿ ಅವರು ಗಟ್ಟಿ ದನಿಯಲ್ಲಿ ಹೇಳುತ್ತಿರುವಾಗ, ಹೂಡಿಕೆದಾರರು ಜರ್ಮನಿಯ ನಾಜಿ ಶೈಲಿಯ ಪ್ರತೀಕಾರದ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಮೋದಿ ಅವರನ್ನು ಆರಾಧಿಸುವ ನಿವೃತ್ತ ಐಎಎಸ್ ಅಧಿಕಾರಿಯು ಬಹಳ ಸ್ನೇಹಪೂರ್ವಕವಾಗಿ ಮಧ್ಯ
ಪ್ರವೇಶಿಸಿ ಮಾತನಾಡಿದರು. ‘ನಿಮ್ಮಲ್ಲಿ ಹಲವರು ಮೋದಿ ಅವರ ಟೀಕಾಕಾರರು ಎಂಬುದು ಗೊತ್ತಿದೆ. ಆದರೆ, ವಿರೋಧ ಪಕ್ಷಗಳಲ್ಲಿ ಯಾರನ್ನು ನಾನು ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದನ್ನು ಹೇಳಿ. ಅವರು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಆಯ್ಕೆ ಮಾಡಲೇ? ಅವರು ಬಹಳ ಸರ್ವಾಧಿಕಾರಿ, ಮೋದಿ ಅವರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಹಗೆ ಸಾಧಿಸುವವರು. ಬಂಗಾಳದಿಂದ ಟಾಟಾ ನ್ಯಾನೊ ಯೋಜನೆಯನ್ನು ಅವರು ಹೊರಹಾಕಿದ ನಂತರದಲ್ಲಿ, ಭಾರತದಲ್ಲಿ ಯಾರಾದರೂ ಹೂಡಿಕೆ ಮಾಡುವರೇ? ಅಧಿಕಾರದಾಹಿ ಹಾಗೂ ಯಾವಾಗಲೂ ಸಂಘರ್ಷದ ಮನಃಸ್ಥಿತಿಯಲ್ಲೇ ಇರುವ ಅರವಿಂದ ಕೇಜ್ರಿವಾಲ್ ಅವರಿಗೆ ಮತ ಹಾಕುವಿರಾ? ಅಷ್ಟೇನೂ ಸಕ್ರಿಯರಾಗಿ ಇಲ್ಲದ ಶರದ್ ಪವಾರ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳಬಹುದೇ? ಸ್ಟಾಲಿನ್, ವಿಜಯನ್, ಉದ್ಧವ್, ಅಖಿಲೇಶ್, ಲಾಲು ಮತ್ತು ಫಾರೂಕ್ ಅಬ್ದುಲ್ಲಾ ಆ ಸ್ಥಾನಕ್ಕೆ ಆಗುವುದಿಲ್ಲ. ಅವರೆಲ್ಲ ಪ್ರಾದೇಶಿಕವಾಗಿ ಪ್ರಬಲ ನಾಯಕರಾದರೂ ಅವರಿಗೆ ರಾಷ್ಟ್ರವ್ಯಾಪಿ ಜನಬೆಂಬಲ ಇಲ್ಲ. ಕೊನೆಯಲ್ಲಿ ಉಳಿಯುವುದು ರಾಹುಲ್ ಮಾತ್ರ. ಅವರು ಬಹಳ ಸಭ್ಯ ವ್ಯಕ್ತಿ, ಒಳ್ಳೆಯ ಉದ್ದೇಶ ಹೊಂದಿರು
ವವರು. ಆದರೆ, ಕಾಂಗ್ರೆಸ್ ಹಡಗನ್ನು ಸರಿದಾರಿಗೆ ತರದ ಅವರು ದೇಶವನ್ನು ಮುನ್ನಡೆಸಬಲ್ಲರೇ? ಇಂಡಿಯಾ ಮೈತ್ರಿಕೂಟ ಕೂಡ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಮೋದಿ ಅವರು ಸೋತರೆ ಅರಾಜಕತೆ ಸೃಷ್ಟಿ ಆಗುವುದಿಲ್ಲವೇ? ವೃತ್ತಿಪರತೆ ಇಲ್ಲದ ವ್ಯಕ್ತಿಗಿಂತ ಸರ್ವಾಧಿಕಾರಿಯೇ ಮಿಗಿಲಲ್ಲವೇ’ ಎಂದು ಪ್ರಶ್ನಿಸಿದರು.

‘ಸರ್ವಾಧಿಕಾರಿಗಿಂತಲೂ ವೃತ್ತಿಪರತೆ ಇಲ್ಲದ ವ್ಯಕ್ತಿಯೇ ಮಿಗಿಲು. ನಾವು ಉಳಿದುಕೊಂಡು, ಇನ್ನೊಂದು ದಿನ ಹೋರಾಟ ನಡೆಸಲಿಕ್ಕಾದರೂ ಆಗುತ್ತದೆ’ ಎಂದು ಬರಹಗಾರರೊಬ್ಬರು ಹೇಳಿದರು. ನಿವೃತ್ತ ಅಧಿಕಾರಿ ಮಾತು ಮುಂದುವರಿಸಿ ‘ಹಿಂದೂ ಮತಗಳ ಮೇಲೆ ಕಣ್ಣಿಟ್ಟು ಮೋದಿ ಅವರು ಕೋಮು ಸೌಹಾರ್ದವನ್ನು ಕದಡಲು ಮತ್ತೆ ಮತ್ತೆ ಯತ್ನಿಸಿದ್ದಾರೆ. ಇದರ ಪರಿಣಾಮವಾಗಿ ಧ್ರುವೀಕರಣ ಆಗಿದೆ, ಹಿಂಸೆ ನಡೆದಿದೆ. ಆದರೆ, ಕಾಂಗ್ರೆಸ್ಸಿನ ಜಾತಿ ರಾಜಕಾರಣ ಮತ್ತು ತುಷ್ಟೀಕರಣ ಕೂಡ ದೇಶವನ್ನು ಒಡೆದಿದೆ. ಮೋದಿ ಅವರಲ್ಲದಿದ್ದರೆ ಇನ್ಯಾರು ಎಂಬುದನ್ನು ಹೇಳಿ’ ಎಂದರು. ಆ ಹೊತ್ತಿನಲ್ಲಿ ನನ್ನ ಪತ್ನಿ ಜಾಣತನದಿಂದ ಎಲ್ಲರ ಗಮನವನ್ನು ಬೇರೆಡೆ ತಿರುಗಿಸಿದರು.

ಕೆಲವರ ಪಾಲಿಗೆ ಚುನಾವಣೆಯು ಒಂದು ಸಂದಿಗ್ಧವನ್ನು ತಂದಿತ್ತಿದೆ. ಹಲವು ಕ್ಷೇತ್ರಗಳಲ್ಲಿ ಮತದಾನ ಈಗಾಗಲೇ ನಡೆದಿದೆ. ಆದರೆ ಇಲ್ಲೆಲ್ಲ ಹತ್ತರಲ್ಲಿ ಒಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸಿಲ್ಲ. ಅವರು ಶಿಕ್ಷಿತರೂ ಹೌದು, ಸಿನಿಕರೂ ಹೌದು. ಅವರು ದ್ವಂದ್ವಕ್ಕೆ ಸಿಲುಕಿದ್ದಾರೆ. ಎಲ್ಲ ರಾಜಕಾರಣಿಗಳೂ ಲಂಚಕೋರರು ಎಂದು ಅವರು ನಂಬಿದ್ದಾರೆ. ವೋಟು ಹಾಕಿ ಏನು ಫಲ ಎಂದು ಅವರು ರೆಸಾರ್ಟ್‌ಗೆ ಹೋಗಿಬಿಡುತ್ತಾರೆ.

ಮತದಾನ ಮಾಡುವವರ ಎದುರು ಆಯ್ಕೆಗಳು ಇವೆ ಎಂಬ ಭ್ರಮೆಯನ್ನು ರಾಜಕೀಯ ಪಕ್ಷಗಳು ಸೃಷ್ಟಿಸುತ್ತಿವೆ. ನೀವು ನಿಮ್ಮನ್ನು ಎಲ್‌ಡೊರಾಡೊದಂತಹ ಚಿನ್ನದ ನಗರಿಯ ಕಡೆ ಕೊಂಡೊಯ್ಯುವ ಬಲಿಷ್ಠ ನಾಯಕನನ್ನು ಆಯ್ಕೆ ಮಾಡಬೇಕು ಅಥವಾ ವಿರೋಧ ಪಕ್ಷಗಳ ನಾಯಕರ ಪೈಕಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಬೇಕು, ಇವಿಷ್ಟೇ ಆಯ್ಕೆಗಳು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಸೃಷ್ಟಿಸಲಾಗುತ್ತಿದೆ. ಆದರೆ ಅದೃಷ್ಟದ ಸಂಗತಿಯೆಂದರೆ ಜನಸಮೂಹಕ್ಕೆ ಸ್ಪಷ್ಟವಾದ ಆಲೋಚನೆ ಇದೆ. ಧಾರ್ಮಿಕ ವ್ಯಕ್ತಿಗಳಂತೆ ನಟಿಸುವ ಕಪಟ ವ್ಯಕ್ತಿಗಳು ಯಾರು ಎಂಬುದನ್ನು ಅವರು ಗುರುತಿಸಬಲ್ಲರು.

ಮತದಾರರಲ್ಲಿ ಇವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರು, ಕಾರ್ಮಿಕರು, ದಿನಗೂಲಿಯವರು, ವ್ಯಾಪಾರಿಗಳು, ತರಕಾರಿ ಮಾರುವವರು, ಮೆಕ್ಯಾನಿಕ್‌ಗಳು ಇವರೆಲ್ಲ ಈ ವರ್ಗಕ್ಕೆ ಸೇರಿದವರು. ನಮ್ಮ ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು ಇವರು. ರಾಜಕಾರಣದ ಮೋಸವು ಇವರಿಗೆ ಬಹಳ ಬೇಗ ಅರ್ಥವಾಗುತ್ತದೆ.

ತಾವು ಇರಿಸಿದ ವಿಶ್ವಾಸಕ್ಕೆ ಚ್ಯುತಿ ತಂದ ವ್ಯಕ್ತಿಯನ್ನು, ಪಕ್ಷವನ್ನು ಅವರು 75 ವರ್ಷಗಳಿಂದಲೂ ಸೋಲಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಈ ವರ್ಗಕ್ಕೆ ಸೇರಿದ ಜನ ತಪ್ಪದೇ ಮತ ಚಲಾಯಿಸುತ್ತಾರೆ. ನಮ್ಮ ಪ್ರಜಾತಂತ್ರವನ್ನು ಉಳಿಸುವಲ್ಲಿ ಇವರೇ ಆಶಾದೀಪಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT