ಬೆಂಗಳೂರು: ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು ಮರುಅಭಿವೃದ್ಧಿಗೊಳಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕ್ರಿಕೆಟ್ ಫ್ರ್ಯಾಂಚೈಸಿ ಮುಂದಾಗಿದೆ.
ತಂಡದ ಹಸಿರು ಅಭಿಯಾನ ಯೋಜನೆಯಲ್ಲಿ ಕಾರ್ಯವನ್ನೂ ಫ್ರ್ಯಾಂಚೈಸಿಯು ಕೈಗೆತ್ತಿಕೊಂಡಿದೆ. ಇಟ್ಟಗಾಲಪುರ ಕೆರೆ ಮತ್ತು ಸದೇನಹಳ್ಳಿ ಕೆರೆ ಪುನರಾಭಿವೃದ್ಧಿ ಕಾರ್ಯವು ಮುಕ್ತಾಯ ಹಂತ ತಲುಪಿದೆ.
ಕಣ್ಣೂರು ಕೆರೆಯಲ್ಲಿ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಇಂಡಿಯಾ ಕೇರ್ಸ್ ಫೌಂಡೇಷನ್ ವರದಿ ನೀಡಿದೆ.
ಆರ್ಸಿಬಿಯು ಕಳೆದ ಅಕ್ಟೋಬರ್ನಿಂದಲೇ ಇಎಸ್ಜಿ ಬದ್ಧತೆಯಡಿಯಲ್ಲಿ ಕೆರೆ ಸುಧಾರಣೆ ಕಾರ್ಯ ಯೋಜನೆಯನ್ನು ಆರಂಭಿಸಿದೆ.
ಕಾವೇರಿ ನೀರಿನಿಂದ ವಂಚಿತವಾಗಿರುವ ಹಾಗೂ ಅಂತರ್ಜಲ ಮತ್ತು ಮಳೆ ನೀರಿನ ಮೂಲದ ಮೇಲೆಯೇ ಅವಲಂಬಿತವಾಗಿರುವ ಪ್ರದೇಶಗಳ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ಇಟ್ಟಗಾಲಪುರ ಮತ್ತು ಸದೇನಹಳ್ಳಿ ಕೆರೆಗಳಿಂದ ಇದುವರೆಗೆ 1.20 ಲಕ್ಷ ಟನ್ ಹೂಳು ಮತ್ತು ಮರಳನ್ನು ಹೊರತೆಗೆಯಲಾಗಿದೆ. ಅದೇ ಮಣ್ಣನ್ನು ಕೆರೆಗಳಿಗೆ ಒಡ್ಡು ಕಟ್ಟಲು ಮತ್ತು ಕಾಲುಹಾದಿ ನಿರ್ಮಿಸಲು ಬಳಸಲಾಗಿದೆ.
ಅಲ್ಲದೇ ಸುತ್ತಮುತ್ತಲಿಗೆ 52 ರೈತರು ತಮ್ಮ ಹೊಲ,ಗದ್ದೆಗಳಿಗಾಗಿ ಈ ಮಣ್ಣು ತೆಗೆದುಕೊಂಡೂ ಹೋಗಿದ್ದಾರೆ ಎಂದು ಆರ್ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಸ್ಥಳೀಯ ಸಮುದಾಯದ ಕಲ್ಯಾಣ ನಮ್ಮ ಗುರಿಯಾಗಿದೆ. ಬೆಂಗಳೂರಿನ ಪ್ರಮುಖ ಕೆರೆಗಳನ್ನು ಮರಳಿ ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೇ ಅಕ್ಕಪಕ್ಕದ ಗ್ರಾಮಗಳಿಗೆ ಕೃಷಿ ಮತ್ತಿತರ ಕಾರ್ಯಗಳಿಗೂ ನೀರಿನ ಸೌಲಭ್ಯ ಒದಗಿಸಲಿದೆ’ ಎಂದು ಆರ್ಸಿಬಿ ಮುಖ್ಯಸ್ಥ ರಾಜೇಶ್ ಮೆನನ್ ಹೇಳಿದ್ದಾರೆ.