ಸಿಲೆಟ್, ಬಾಂಗ್ಲಾದೇಶ: ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತ ತಂಡವು ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 3–0 ಮುನ್ನಡೆ ಸಾಧಿಸಿದೆ. ಸೋಮವಾರ ನಾಲ್ಕನೇ ಪಂದ್ಯವನ್ನು ಆಡಲಿದೆ. ಇದೂ ಸೇರಿದಂತೆ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಭಾರತ ಆಟಗಾರ್ತಿಯರು ತಮ್ಮ ಸಾಮರ್ಥ್ಯ ಸುಧಾರಣೆ ಮಾಡಿಕೊಳ್ಳುವ ಅವಕಾಶ ಇದೆ.
ಕಳೆದ ಮೂರು ಪಂದ್ಯಗಳಲ್ಲಿ ಸೇರಿ ಭಾರತದ ಶಫಾಲಿ ವರ್ಮಾ ಅವರು ಮಾತ್ರ ಒಂದು ಅರ್ಧಶತಕ ಬಾರಿಸಿದ್ದಾರೆ. ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿ (82 ರನ್) ಅವರಾಗಿದ್ದಾರೆ.
ಆದರೆ ಅನುಭವಿ ಬ್ಯಾಟರ್ಗಳಾದ ಸ್ಮೃತಿ ಮಂದಾನ ಮತ್ತು ಹರ್ಮನ್ಪ್ರೀತ್ ಕೌರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಎದುರು ಸರಣಿ ಆಡಬೇಕಿರುವ ತಂಡವು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಬಾಂಗ್ಲಾ ಎದುರಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್, ತಿತಾಸ್ ಸಾಧು, ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಅವರ ಮೇಲೆ ಹೆಚ್ಚು ಭರವಸೆ ಇದೆ.
ನಿಜರ್ ಸುಲ್ತಾನಾ ಅವರ ನಾಯಕತ್ವದ ಬಾಂಗ್ಲಾದೇಶ ತಂಡವು ಪುಟಿದೇಳುವ ನಿರೀಕ್ಷೆಯಲ್ಲಿದೆ. ಸಮಾಧಾನಕರ ಗೆಲುವಿಗಾಗಿ ಹೋರಾಟ ನಡೆಸಲು ಸಿದ್ಧವಾಗಿದೆ.