ಮೈಸೂರು: ‘ಈ ಬಾರಿಯ ಚುನಾವಣಾ ಫಲಿತಾಂಶ ಬಿಜೆಪಿಯ ಪರವಾಗಿಯೇ ಇರಲಿದ್ದು, ಉತ್ತಮ ಅಂತರದಲ್ಲಿ ಗೆಲ್ಲಲಿದ್ದೇನೆ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಶೇ 70ರಷ್ಟು ಮತದಾನ ಆಗಿದ್ದು ಸಂತಸದ ಸಂಗತಿ. ಎಲ್ಲೆಲ್ಲಿ ನಮಗೆ ಮುನ್ನಡೆ ಬರಬಹುದು ಎಂಬ ಮಾಹಿತಿ ಇನ್ನಷ್ಟೇ ಬರುತ್ತಿದೆ. ಇಂತಿಷ್ಟೇ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಹೇಳುವುದಿಲ್ಲ. ಆದರೆ ಗೆಲುವು ಖಚಿತ’ ಎಂದರು.
‘ನನ್ನ ಪರ ಪ್ರಚಾರ ಮಾಡಿದ ಪಕ್ಷದ ಎಲ್ಲ ನಾಯಕರಿಗೆ, ಕಾರ್ಯಕರ್ತರಿಗೆ ಧನ್ಯವಾದ. ಪ್ರಚಾರದ ಸಂದರ್ಭ ದೊರೆತ ಅನುಭವ ವಿಶಿಷ್ಟವಾದುದು. ನಮ್ಮ ಹಿನ್ನೆಲೆ ಏನೇ ಇದ್ದರೂ ಜನರು ನಮ್ಮ ಯೋಗ್ಯತೆ ನೋಡಿಯೇ ಮತ ಹಾಕುತ್ತಾರೆ. ಜನರು–ಅರಮನೆ ನಡುವಿನ ಸಂಬಂಧ ಇದ್ದೇ ಇರುತ್ತದೆ’ ಎಂದರು.
‘ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ನಮಗೆ ಖಂಡಿತ ಪ್ಲಸ್ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.