ಬೆಂಗಳೂರು: ಭಾರತ ಸೇರಿದಂತೆ ವಿದೇಶಗಳಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ರಕ್ಷಣೆ, ಆರೈಕೆ, ಚಿಕಿತ್ಸೆ ನೀಡಲು ಗುಜರಾತ್ನ ಜಾಮ್ನಗರದಲ್ಲಿ ಇರುವ ರಿಲಯನ್ಸ್ ರಿಫೈನರಿ ಸಮುಚ್ಚಯದಲ್ಲಿ ರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ರಿಲಯನ್ಸ್ ಫೌಂಡೇಷನ್ನಿಂದ ಆರಂಭಿಸಿರುವ ಈ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಕ್ಕೆ ‘ವಂತಾರ’ (ಸ್ಟಾರ್ ಆಫ್ ದ ಫಾರೆಸ್ಟ್) ಎಂದು ಹೆಸರಿಡಲಾಗಿದೆ. ಈ ಹಸಿರು ವಲಯವು ಸುಮಾರು ಮೂರು ಸಾವಿರ ಎಕರೆಯಲ್ಲಿ ವ್ಯಾಪಿಸಿದೆ.
ಜಾಗತಿಕ ಮಟ್ಟದಲ್ಲಿ ವನ್ಯಜೀವಿ ಸಂರಕ್ಷಣೆಯ ಕ್ರಮಗಳಿಗೆ ಉತ್ತೇಜನ ನೀಡಲು ‘ವಂತಾರ’ ವೇದಿಕೆ ಆಗಲಿದೆ. ಪ್ರಾಣಿಗಳ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ವನ್ಯಜೀವಿ ವಿಜ್ಞಾನಿಗಳ ಜೊತೆಗೆ ಸಮಾಲೋಚನೆ ನಡೆಸಿ ಇದನ್ನು ನಿರ್ಮಿಸಲಾಗಿದೆ. 40ಕ್ಕೂ ಹೆಚ್ಚು ಪ್ರಭೇದದ ಎರಡು ಸಾವಿರಕ್ಕೂ ಅಧಿಕ ಪ್ರಾಣಿಗಳು ಇಲ್ಲಿನ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿವೆ. ಇನ್ನೂರು ಆನೆಗಳ ಸಂರಕ್ಷಣೆಯನ್ನೂ ಮಾಡಲಾಗುತ್ತಿದೆ.
‘ವಂತಾರ’ವು ರಿಲಯನ್ಸ್ ಮಂಡಳಿ ಹಾಗೂ ರಿಲಯನ್ಸ್ ಫೌಂಡೇಷನ್ ನಿರ್ದೇಶಕ ಅನಂತ್ ಅಂಬಾನಿ ಅವರ ನಾಯಕತ್ವದಲ್ಲಿ ರೂಪುಗೊಂಡಿದೆ.
‘ಬಾಲ್ಯದಲ್ಲಿ ನನಗೆ ಶುರುವಾದ ಪ್ರಾಣಿಗಳ ಬಗೆಗಿನ ಪ್ರೀತಿಯು ‘ವಂತಾರ’ ರೂಪದಲ್ಲಿ ಸಾಕಾರಗೊಂಡಿದೆ. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳ ಸಂರಕ್ಷಣೆಗೂ ಗಮನಹರಿಸಿದ್ದೇವೆ. ಅಲ್ಲದೇ, ವನ್ಯಜೀವಿಗಳ ಪ್ರಮುಖ ಆವಾಸ ಸ್ಥಾನಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು’ ಎಂದು ಅನಂತ್ ಅಂಬಾನಿ ತಿಳಿಸಿದ್ದಾರೆ.
‘ಭಾರತ ಸೇರಿದಂತೆ ವಿಶ್ವದ ಹಲವು ವನ್ಯಜೀವಿ ವಿಜ್ಞಾನಿಗಳು, ತಜ್ಞರು ಮತ್ತು ವೈದ್ಯಕೀಯ ತಜ್ಞರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ. ಅಲ್ಲದೆ, ದೇಶದಲ್ಲಿರುವ 150ಕ್ಕೂ ಹೆಚ್ಚು ಮೃಗಾಲಯಗಳ ಸುಧಾರಣೆಗೆ ‘ವಂತಾರ’ ಮೂಲಕ ಕೈಜೋಡಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದ್ದಾರೆ.