ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣದ 12 ಆರೋಪಿಗಳು ಸೋಮವಾರ ತಡರಾತ್ರಿ ಜಾಮೀನು ಮೇಲೆ ಬಿಡುಗಡೆಯಾದರು.
ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕನ್ನು ಹೊರತುಪಡಿಸಿ, ಎಲ್ಲ 12 ಮಂದಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಲ್ಲಿನ ಹಿಂಡಲಗಾ ಜೈಲಿನಿಂದ ರಾತ್ರಿ ಹೊರಬಂದ ಎಲ್ಲ ಆರೋಪಿಗಳನ್ನೂ ಅವರ ಬಂಧು– ಮಿತ್ರರು ಮಾಲೆ ಹಾಕಿ ಸ್ವಾಗತಿಸಿದರು. ಸಿಹಿ ಹಂಚಿ, ಅಪ್ಪಿಕೊಂಡು ಖುಷಿಪಟ್ಟರು. ಅದರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಪ್ರೀತಿಸಿದ ಯುವಕ– ಯುವತಿ ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಯುವತಿಯ ಪಾಲಕರು ಹಾಗೂ ಸಂಬಂಧಿಗಳು ಕಳೆದ ಡಿ.11ರಂದು ಯುವಕನ ಮನೆಯ ಮೇಲೆ ದಾಳಿ ನಡೆಸಿದ್ದರು. ಕಲ್ಲು, ಇಟ್ಟಿಗೆ, ಬಡಿಗೆಗಳಿಂದ ದಾಳಿ ಮಾಡಿ ದ್ವಂಸಗೊಳಿಸಿದ್ದರು. ಯುವಕನ ತಾಯಿಯನ್ನು ಮನೆಯಿಂದ ಹೊರಗೆಳೆದು ಹೊಡೆದಿದ್ದರು. ಬಟ್ಟೆ ಹರಿದು ಸಂಪೂರ್ಣ ಬೆತ್ತಲೆ ಮಾಡಿ ರಸ್ತೆಯಲ್ಲಿ ಎಳೆದೊಯ್ದು ಕಂಬಕ್ಕೆ ಕಟ್ಟಿದ್ದರು.